ಬಾಗಲಕೋಟೆ: ಡ್ರಾಪ್ ಕೇಳಿ ಬೊಲೆರೋ ಪಿಕ್ ಅಪ್ ವಾಹನವೇರಿದ ದುಷ್ಕರ್ಮಿಗಳು ವಾಹನದ ಮಾಲೀಕನನ್ನೇ ರಸ್ತೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದ ನಿವಾಸಿ ಶಿವಾನಂದ ಶಿಂಗೆ(25) ಕೊಲೆಯಾದ ವ್ಯಕ್ತಿ. ಘಟನೆಯಲ್ಲಿ ಚಾಲಕ ನಿಂಗರಾಜು ಮೇಲೆಯೂ ಹಲ್ಲೆ ನಡೆಸಲಾಗಿದೆ.
ಡ್ರಾಪ್ ಕೊಡುವಂತೆ ಕೇಳಿದ ದುಷ್ಕರ್ಮಿಗಳು ವಾಹನದಲ್ಲಿ ಕುಳಿತಿದ್ದಾರೆ. ಬಳಿಕ ಹಣ ನೀಡುವಂತೆ ಶಿವಾನಂದ ಅವರನ್ನು ಬೆದರಿಸಿದ್ದಾರೆ. ಇದಕ್ಕೆ ಪ್ರತಿರೋಧ ಒಡ್ಡಿದಾಗ ಶಿವಾನಂದ ಅವರನ್ನು ರಸ್ತೆಗೆ ತಳ್ಳಿದ್ದಾರೆ. ಪರಿಣಾಮ ಶಿವಾನಂದ ಅವರ ತಲೆಗೆ ಬಲವಾದ ಏಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಚಾಲಕ ನಿಂಗರಾಜ ಅವರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಶಿವಾನಂದ ಅವರು ಮಂಗಳೂರಿಗೆ ಹೋಗಿ ದಾಳಿಂಬೆ ಮಾರಿ ಬರುತ್ತಿದ್ದ ಸಂದರ್ಭದಲ್ಲಿ ಅನಗವಾಡಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸೋಮವಾರ ತಡರಾತ್ರಿ ಈ ಕೃತ್ಯ ಎಸಗಲಾಗಿದೆ.
ವಾಹನ ಚಲಿಸುತ್ತಿದ್ದಂತೆಯೇ ವಾಹನದ ಮಾಲೀಕನನ್ನು ರಸ್ತೆಗೆ ತಳ್ಳಿ ಕೊಲೆ ಮಾಡಿದ್ದಾರೆ. ಬೀಳಗಿ ಪೊಲೀಸರು ಹಾಗೂ ಬಾಗಲಕೋಟೆ ಎಸ್ಪಿ ಸಿಬಿ ರಿಷ್ಯಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.