ಶಿವಮೊಗ್ಗ: ಮಹಿಳೆಯರು ಮಕ್ಕಳಿಗೆ ಬಸ್ ನಿಲ್ದಾಣದಲ್ಲಿ ಹೊರಗಡೆ ಹಾಲುಣಿಸಬೇಕಾಗುತ್ತದೆ. ಹೀಗಾಗಿ ಅವರಿಗೆ ಸಹಾಯವಾಗಲೇಂದು ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲೂ ತಾಯಿ ಮಡಿಲ (ಬೇಬಿ ಕೇರ್) ಕೊಠಡಿಯನ್ನು ನಿರ್ಮಾಣ ಮಾಡುವುದಾಗಿ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೆಎಸ್ಆರ್ಟಿಸಿ ಸೇರಿ ಯಾವುದೇ ಸಾರಿಗೆ ಸಂಸ್ಥೆ ಖಾಸಗೀಕರಣ ಇಲ್ಲ. 1.16 ಲಕ್ಷ ಕನ್ನಡಿಗರಿಗೆ ಅದರಲ್ಲೂ ಗ್ರಾಮೀಣ ಜನರಿಗೆ ಉದ್ಯೋಗ ನೀಡಿರುವ ಸಂಸ್ಥೆ ಇದು. ಇಂಥ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದಿಲ್ಲ. ರಾಜ್ಯದ ಸಾರಿಗೆ ಸಂಸ್ಥೆಗಳು ವಾರ್ಷಿಕ 500 ಕೋಟಿ ರೂ. ನಷ್ಟದಲ್ಲಿವೆ. ಈ ನಷ್ಟ ಸರಿದೂಗಿಸಲು ಹಲವು ಯೋಜನೆ ಹಮ್ಮಿಕೊಳ್ಳಲಾಗಿದೆ. ಸುಸ್ಥಿತಿಯಲ್ಲಿರುವ ಹಳೇ ಚಾಸಿಗಳಿಗೆ ಹೊಸ ಬಾಡಿ ಕಟ್ಟಿಸಿ ಓಡಿಸಲಾಗುವುದು. ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚು ಅವಕಾಶ ನೀಡಲಾಗುವುದು ಎಂದು ಹೇಳಿದರು.
ಎಂಎಸ್ಐಎಲ್ ಅವರ ಸಹಯೋಗದೊಂದಿಗೆ ಎಲ್ಲಾ ಬಸ್ ನಿಲ್ದಾಣದಲ್ಲೂ ಅವರದೊಂದು ಸಣ್ಣ ಮಳಿಗೆ ಇರಿಸಲಾಗುತ್ತದೆ. ಅದರಲ್ಲಿ ಪುಸ್ತಕ ಇತರ ವಸ್ತುಗಳ ಮಾರಾಟ ಮಾಡುವ ವ್ಯವಸ್ಥೆ ಇದೆ. ಯಾರು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಾರೋ ಆ ಬಸ್ಸಿನ ಟಿಕೆಟ್ ತೋರಿಸಿದರೆ ಅವರಿಗೆ 35 ರಿಂದ 40% ಡಿಸ್ಕೌಂಟ್ನಲ್ಲಿ ಎಂಎಸ್ಐಎಲ್ ಪದಾರ್ಥಗಳು ದೊರಕುತ್ತವೆ. ಅದರೊಂದಿಗೆ ಮಹಿಳೆಯರಿಗಾಗಿ ನ್ಯಾಪ್ಕಿನ್ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಮಹಿಳೆಯ ಶೌಚಾಲಯದಲ್ಲಿ ನ್ಯಾಪ್ಕಿನ್ ಬರ್ನಿಂಗ್ ಸೆಂಟರ್ ಅನ್ನು ಇಡಲಾಗುತ್ತದೆ. ಮುಂದಿನ ದಿನಗಳಲ್ಲಿ ಹೈಟೆಕ್ ನಿಲ್ದಾಣಗಳನ್ನು ಮಾಡುತ್ತೇವೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv