ಶಿವಮೊಗ್ಗ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಈ ಹಿಂದೆ ನನಗೆ ಬಿಜೆಪಿ ಕಡೆಯವರಿಂದ ಮಂತ್ರಿಗಿರಿ, ಹಣದ ಆಫರ್ ಮಾಡಿದ್ದರು ಎಂದು ಆರೋಪಿಸಿದ್ದರು. ಈಗ ಅವರು ಮಾಡಿದ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಹಿರಂಗವಾಗಿಯೇ ಸವಾಲ್ ಹಾಕಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ವೈ, ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಕ್ಕೆ ತಿರುಗೇಟು ನೀಡಿದ್ರು. ಅವರ ಹಗುರವಾದ ಮಾತುಗಳಿಗೆ ಕವಡೆಕಾಸಿನ ಕಿಮ್ಮತ್ತು ಕೊಡಬಾರದು. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಗೌರವದಿಂದ ಒಂದು ಮಾತು ಹೇಳಲು ಇಷ್ಟ ಪಡುತ್ತೇನೆ. ನಿಮ್ಮನ್ನು ಕೇಳಿದ್ದು ಯಾರು? ಇಷ್ಟು ದಿನ ಯಾಕೆ ಬಾಯಿ ಮುಚ್ಚಿಕೊಂಡು ಸುಮ್ಮನ್ನಿದ್ರಿ. ಮಂತ್ರಿಗಿರಿ ಆಫರ್ ಯಾರು ಮಾಡಿದ್ದರು ಎಂಬುದನ್ನು ಬಹಿರಂಗ ಮಾಡಿ ರಾಜ್ಯದ ಜನತೆಗೆ ಸತ್ಯವನ್ನು ತಿಳಿಸಿ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ನನಗೆ 30 ಕೋಟಿ ಕೊಡ್ತೀವಿ ಪಕ್ಷಕ್ಕೆ ಬನ್ನಿ ಅಂದಿದ್ದರು- ಲಕ್ಷ್ಮಿ ಹೆಬ್ಬಾಳ್ಕರ್
ಆರೋಪ ಮಾಡುವುದೇ ಕಾಂಗ್ರೆಸ್ ನಾಯಕರ ಕೆಲಸ ಆಗಿದ್ರೆ ನಾವೇನೂ ಹೇಳುವುದಿಲ್ಲ. ಸಾಕ್ಷ್ಯಾಧಾರ ಇಲ್ಲದ ಅವರ ಹೇಳಿಕೆ ನೋವು ತಂದಿದೆ. ಮುಖ್ಯಮಂತ್ರಿಗಳೇ ನಮ್ಮ ಕಲಬುರಗಿ ಜಿಲ್ಲೆಯ ಶಾಸಕರಿಗೆ ಮಂತ್ರಿಗಿರಿ ಆಫರ್ ಮಾಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 22 ಸೀಟು ಗೆಲ್ಲುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ನಾನು ರಾಜ್ಯ ಪ್ರವಾಸ ಮಾಡಲಿದ್ದೇನೆ. ನಾವು ಪ್ರತಿಪಕ್ಷ ಸ್ಥಾನದಲ್ಲಿ ಇದ್ದು, ನಮ್ಮ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಅವರು ಒಗ್ಗಟ್ಟಾಗಿದ್ದರೆ ನಾವು ಸರ್ಕಾರ ಮಾಡುವ ಪ್ರಶ್ನೆನೇ ಬರುವುದಿಲ್ಲ. ಅವರೇ ಕಚ್ಚಾಡಿಕೊಂಡು ಸರ್ಕಾರ ಬಿದ್ದರೆ ಮುಂದೆ ನೋಡುತ್ತೇವೆ. ಅದೂವರೆಗೂ ಸರ್ಕಾರ ಬೀಳುಸುವ ದಿಕ್ಕಿನಲ್ಲಿ ನಾವು ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ಬಿಎಸ್ವೈ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv