– ಏರ್ಪೋರ್ಟ್ಗೆ ಬರುತ್ತಿದ್ದಂತೆ ಮಗಳನ್ನು ಎತ್ತಿ ಮುದ್ದಾಡಿದ ಶಿಲ್ಪಿ
– 6 ತಿಂಗಳಿಂದ ಕುಟುಂಬಸ್ಥರಿಂದ ದೂರ ಇದ್ದ ಅರುಣ್ ಯೋಗಿರಾಜ್
ಬೆಂಗಳೂರು: ಅಯೋಧ್ಯೆ ರಾಮಮಂದಿರದ (Ayodhya Ram Mandir) ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ರಾಮಲಲ್ಲಾ (Ram Lalla) ವಿಗ್ರಹವನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ಅಯೋಧ್ಯೆಯಿಂದ ತಾಯ್ನಾಡಿಗೆ ಇಂದು (ಬುಧವಾರ) ಮರಳಿದರು. ಖ್ಯಾತ ಶಿಲ್ಪಿ ಬೆಂಗಳೂರಿನ ಏರ್ಪೋರ್ಟ್ಗೆ ಆಗಮಿಸುತ್ತಿದ್ದಂತೆ ರಾಮಭಕ್ತರು ಭವ್ಯ ಸ್ವಾಗತ ಕೋರಿದರು. ಏರ್ಪೋರ್ಟ್ನಲ್ಲಿ ‘ಜೈ ಶ್ರೀರಾಮ್’ ಘೋಷಣೆ ಮೊಳಗಿತು. ತನಗೆ ಸಿಕ್ಕಿ ಸ್ವಾಗತ, ಸನ್ಮಾನ ಕಂಡು ದೇವಶಿಲ್ಪಿ ಒಂದುಕ್ಷಣ ಭಾವುಕರಾದರು.
- Advertisement 2
ಅರುಣ್ ಯೋಗಿರಾಜ್ ಬರುವ ವಿಷಯ ತಿಳಿಯುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಜನ ಏರ್ಪೋರ್ಟ್ನಲ್ಲಿ ನೆರೆದಿದ್ದರು. ಕೇಂಪೇಗೌಡ ಏರ್ಪೋರ್ಟ್ ಟರ್ಮಿನಲ್-2 ರಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಶಿಲ್ಪಿಯನ್ನು ಬರಮಾಡಿಕೊಳ್ಳಲು ಕುಟುಂಬಸ್ಥರು ಕೂಡ ಸ್ಥಳದಲ್ಲಿದ್ದರು. ಭರ್ಜರಿ ಸ್ವಾಗತ ಕೋರಲು ಬಿಜೆಪಿ ನಾಯಕರು, ಕಾರ್ಯಕರ್ತರು ಹಾಗೂ ರಾಮಭಕ್ತರು ನೆರೆದಿದ್ದರು. ಇದನ್ನೂ ಓದಿ: ರಾಮಮಂದಿರ ಗರ್ಭಗುಡಿ ಸೇರಲು ಸ್ಪರ್ಧೆಯಲ್ಲಿದ್ದ 3ನೇ ರಾಮಲಲ್ಲಾ ವಿಗ್ರಹದ ಫೋಟೋ ವೈರಲ್
- Advertisement 3
- Advertisement 4
ಕಳೆದ 6 ತಿಂಗಳಿಂದ ಕುಟುಂಬದವರಿಂದ ದೂರ ಇದ್ದ ಶಿಲ್ಪಿ ಬೆಂಗಳೂರಿನ ಏರ್ಪೋರ್ಟ್ಗೆ ಆಗಮಿಸುತ್ತಿದ್ದಂತೆ ತನ್ನ ಮಗಳನ್ನು ಎತ್ತಿಕೊಂಡು ವಾತ್ಸಲ್ಯ ಮೆರೆದರು. ಸುಂದರ ಬಾಲರಾಮ ವಿಗ್ರಹ ಕೆತ್ತಿ ಕೋಟ್ಯಂತರ ರಾಮಭಕ್ತರ ಮನಗೆದ್ದ ಶಿಲ್ಪಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಹಾರ ಹಾಕಿ ಬರಮಾಡಿಕೊಳ್ಳಲಾಯಿತು.
ಅರುಣ್ ಯೋಗಿರಾಜ್ ಅವರ ರಾಮಲಲ್ಲಾ ವಿಗ್ರಹವು ಈಗಾಗಲೇ ರಾಮಮಂದಿರದ ಗರ್ಭಗುಡಿಯನ್ನು ಅಲಂಕರಿಸಿದೆ. ಇತರೆ ಇಬ್ಬರು ಸ್ಪರ್ಧಿಗಳು ದೇವಾಲಯದ ಪವಿತ್ರ ಆವರಣದಲ್ಲಿ ಗೌರವ ಸ್ಥಾನಕ್ಕಾಗಿ ಸ್ಪರ್ಧಿಸಿದ್ದರು. ಅವುಗಳಲ್ಲಿ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೆತ್ತಿಸಿದ ಬಿಳಿ ಅಮೃತಶಿಲೆಯ ವಿಗ್ರಹವೂ ಇತ್ತು. ಈ ವಿಗ್ರಹಗಳು ದೇವಾಲಯದ ‘ಗರ್ಭಗೃಹ’ದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದಿದ್ದರೂ, ರಾಮಮಂದಿರದಲ್ಲಿ ಬೇರೆಡೆ ಪೂಜ್ಯ ಸ್ಥಾನವನ್ನು ಪಡೆಯಲಿವೆ. ಇದನ್ನೂ ಓದಿ: ಅಯೋಧ್ಯೆಗೆ ಬರೋ ಮುನ್ನ ಮೈಸೂರಿನ ಚಿಣ್ಣರ ಮೇಳದಲ್ಲಿ ಸಮಯ ಕಳೆದಿದ್ದೆ- ಶಿಲ್ಪಿ ಅರುಣ್ ಯೋಗಿರಾಜ್ ಬಿಚ್ಚಿಟ್ಟ ಸತ್ಯ
ಅಯೋಧ್ಯೆಯ ಭವ್ಯ ಮಂದಿರದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ನೂರಾರು ಧಾರ್ಮಿಕ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಉಪಸ್ಥಿತರಿದ್ದರು.