ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮಂದಿರ (Ayodhya Ram Mandir) ಲೋಕಾರ್ಪಣೆಗೆ ಇನ್ನು 18 ದಿನಗಳು ಮಾತ್ರ ಉಳಿದಿವೆ. ಇಡೀ ಅಯೋಧ್ಯಾ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿವೆ. ಅಯೋಧ್ಯೆ ಬೀದಿ ಬೀದಿಗಳಲ್ಲೂ ಶ್ರೀರಾಮನ ವರ್ಣಕಲೆ ಮಿಂದೇಳುತ್ತಿವೆ. ಇದರೊಂದಿಗೆ ಜ.22ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಭದ್ರತೆಯ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಲಾಗಿದೆ.
ಜ.22 ರಂದು ಪ್ರಧಾನಿ ಮೋದಿ (Narendra Modi) ಅವರು ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆಯ (Security) ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅಂದು ಕೃತಕ ಬುದ್ಧಿಮತ್ತೆ (AI Surveillance) ಕಣ್ಗಾವಲಿಗೆ ನಿಯೋಜಿಸುವ ಸಾಧ್ಯತೆಯಿದೆ. ರಾಮಮಂದಿರ ಉದ್ಘಾಟನೆಯ ನಂತರ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಭದ್ರತೆ ನಿಯೋಜಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: Ayodhya Ram Mandir: ಆನೆ, ಸಿಂಹ, ಹನುಮಾನ್, ಗರುಡ ಮೂರ್ತಿಗಳ ಫೋಟೋ ಬಿಡುಗಡೆ
ಅಂದು ಕೃತಕ ಬುದ್ಧಿಮತ್ತೆಯೊಂದಿಗೆ 11,000 ರಾಜ್ಯ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗುತ್ತದೆ ಎಂದು ಹೇಳಲಾಗಿದೆ. ಆದ್ರೆ ಈ ತೀರ್ಮಾನವನ್ನು ಅಂತಿಮಗೊಳಿಸಲಾಗಿಲ್ಲ. ಈ ನಡುವೆ ರಾಮಮಂದಿರಕ್ಕೆ ಬೆದರಿಕೆಗಳೂ ಕೇಳಿಬಂದಿರುವುದರಿಂದ ಭದ್ರತಾ ಸಿಬ್ಬಂದಿ ಸಂಖ್ಯೆ ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. ಅಂದಿನ ದಿನ ಅಯೋಧ್ಯೆ ಕಡೆಗೆ ಹೋಗುವ ಎಲ್ಲ ರಸ್ತೆಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಸಹ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನೆಯಂದು ಇಡೀ ದಿನ ಪ್ರಧಾನಿ ಮೋದಿ ಉಪವಾಸ!
ಯುಪಿ ಆಂಟಿ-ಟೆರರ್ ಸ್ಕ್ವಾಡ್ (ATS) ಮತ್ತು ವಿಶೇಷ ಕಾರ್ಯಪಡೆ (STF) ತಂಡಗಳು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ನಂತಹ ಕೇಂದ್ರೀಯ ಏಜೆನ್ಸಿಗಳ ಜೊತೆಗೆ 8,000 ನಾಗರಿಕ ಪೊಲೀಸ್ ಸಿಬ್ಬಂದಿ, 34 ಸಬ್ ಇನ್ಸ್ಪೆಕ್ಟರ್ಗಳು, 71 ಹೆಡ್ ಕಾನ್ಸ್ಟೆಬಲ್ಗಳು ಮತ್ತು 312 ಕಾನ್ಸ್ಟೆಬಲ್ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ರಾಮಮಂದಿರ ಇರುವ ಕೆಂಪು ವಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿರಲಿದ್ದು, ಗುಪ್ತಚರ ಘಟಕದ ಸುಮಾರು 38 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಮತ್ತು ವಿಧ್ವಂಸಕ ಕೃತ್ಯ ವಿರೋಧಿ ತಂಡಗಳು, ಪೊಲೀಸ್ ರೇಡಿಯೊ ಸಂವಹನದ 4 ಸಿಬ್ಬಂದಿ ಮತ್ತು 47 ಅಗ್ನಿಶಾಮಕ ಸಿಬ್ಬಂದಿಯನ್ನ ಭದ್ರತೆಗೆ ನೇಮಿಸಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಾಲರಾಮನ ಮೂರ್ತಿ ಹೇಗಿರಲಿದೆ – ಕುತೂಹಲದ ಪ್ರಶ್ನೆಗೆ ಜ.22 ರಂದು ಸಿಗಲಿದೆ ಉತ್ತರ