ಗುವಾಹಟಿ: ಮನೆಯಲ್ಲೇ ನಡೆದ ಕಳ್ಳತನದ ಹಿಂದೆ ಮಗ ಇದ್ದಾನೆ ಎಂಬ ಆರೋಪ ಅಸ್ಸಾಂನ (Assam) ಜೋರ್ಹಾಟ್ನಲ್ಲಿ ಬೆಳಕಿಗೆ ಬಂದಿದ್ದು, ಈ ಪ್ರಕರಣ ಇದೀಗ ಭಾರೀ ಸಂಚಲನ ಮೂಡಿಸಿದೆ. ಅಪ್ಪ-ಅಮ್ಮ ಮನೆಯಿಂದ ಹೊರಗೆ ಹೋಗಿದ್ದಾಗ ಸ್ವಂತ ಮಗನೇ ಸುಮಾರು 50 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ (Gold jewelry) ಕಳ್ಳತನ ಮಾಡಿದ್ದಾನೆ. ಕದ್ದ ಹಣದ ಒಂದು ಭಾಗವನ್ನ ತನ್ನ ಗರ್ಲ್ಫ್ರೆಂಡ್ಗಾಗಿ ಖರ್ಚು ಮಾಡಿದ್ದಾನೆ ಎಂದು ಹೇಳಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಎಂದು ಯಶ್ ಧನುಕಾ (Yash Dhanuka) ಎಂದು ಗುರುತಿಸಲಾಗಿದೆ. ಪೋಷಕರು ಮನೆಯಿಂದ ಹೊರಗೆ ಹೋಗಿದ್ದಾಗ, ಮನೆಯ ಲಾಕರ್ನಲ್ಲಿದ್ದ 50 ಲಕ್ಷದಷ್ಟು ಹಣ ಹಾಗೂ ಚಿನ್ನಾಭರಣವನ್ನ ಯಶ್ ಧನುಕಾ ತೆಗೆದುಕೊಂಡಿದ್ದಾನೆ. ಪೋಷಕರು ವಾಪಸ್ ಬಂದಾಗ ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಬಳಿಕ ಯಶ್ನ ತಂದೆ ಆಗಸ್ಟ್ 24ರಂದು ಜೋರ್ಹಾಟ್ ಪೊಲೀಸ್ ಠಾಣೆಗೆ ದೂರು ನೀಡಿ, FIR ಕೂಡ ದಾಖಲಿಸಿದ್ದಾರೆ.

FIRನಲ್ಲಿ ಯಶ್ ಧನುಕಾ ಜೊತೆಗೆ ಜಿತೇಂದ್ರ ಸೋಮಾನಿ, ರೋಹಿತ್ ಪ್ರಸಾದ್ ಮತ್ತು ಪಬಾಲಿ ದತ್ತಾ (Pubali Dutta) ಎಂಬವರ ಹೆಸರೂ ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ಪ್ರತಿಯೊಬ್ಬರ ಪಾತ್ರವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ನೇಹಿತರೇ ಕಳ್ಳತನಕ್ಕೆ ಪ್ರಚೋದನೆ ನೀಡಿದ್ರಾ?
ಪೊಲೀಸರ ವಿಚಾರಣೆಯಲ್ಲಿ ಯಶ್ ನೀಡಿದ ಹೇಳಿಕೆ ಪ್ರಕಾರ, ಜಿತೇಂದ್ರ ಸೋಮಾನಿ ಮತ್ತು ರೋಹಿತ್ ಪ್ರಸಾದ್ ಜೊತೆ ಸೇರಿ ಕಳ್ಳತನಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಇಬ್ಬರೂ ಕಳ್ಳತನ ಮಾಡಲು ಆತನಿಗೆ ಪ್ರಚೋದನೆ ನೀಡಿ, ಹೇಗೆ ಕಳ್ಳತನ ಮಾಡಬೇಕು ಎಂಬುದನ್ನೂ ಹೇಳಿಕೊಟ್ಟಿದ್ರು. ಲಾಕರ್ ತೆರೆಯಲು ಲಾಕ್ಸ್ಮಿತ್ನ ಸಹಾಯ ಪಡೆಯಲಾಗಿತ್ತು. ಹೇಳಿಕೆ ದಾಖಲಿಸಿಕೊಂಡ ಬಳಿಕ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಗರ್ಲ್ಫ್ರೆಂಡ್ಗೆ 5 ಲಕ್ಷ ಖರ್ಚು?
ಇನ್ನೂ ಕದ್ದ ಹಣದಲ್ಲಿ ಸುಮಾರು 5 ಲಕ್ಷವನ್ನ ಪಬಾಲಿ ದತ್ತಾ ಹೆಸರಿನ ತನ್ನ ಗರ್ಲ್ಫ್ರೆಂಡ್ಗಾಗಿ ಖರ್ಚು ಮಾಡಿದ್ದಾಗಿ ಯಶ್ ಹೇಳಿದ್ದಾನೆ. ಇದರಲ್ಲಿ ಸುಮಾರು 1.5 ಲಕ್ಷ ಮೌಲ್ಯದ iPhone ಉಡುಗೊರೆಯಾಗಿ ನೀಡಿರುವುದು ಹಾಗೂ ನಗದು ಹಣ ನೀಡಿರುವ ಆರೋಪವೂ ಇದೆ.

ಯಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನನಗೆ ನಿಜವಾಗಿಯೂ ಪಶ್ಚಾತ್ತಾಪವಿದೆ. ಜೀತು ಸೋಮಾನಿ ನನ್ನನ್ನು ದಾರಿ ತಪ್ಪಿಸಿದ ಎಂದು ಹೇಳಿದ್ದಾನೆ. ಜಿತೇಂದ್ರ ಸೋಮಾನಿ ಮತ್ತು ರೋಹಿತ್ ಪ್ರಸಾದ್ ಕಳ್ಳತನದ ಯೋಜನೆಯಲ್ಲಿ ಭಾಗಿಯಾಗಿದ್ದರು. ಕದ್ದ ಚಿನ್ನಾಭರಣವನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ್ದರು ಎಂದು ಯಶ್ ಆರೋಪಿಸಿದ್ದಾನೆ. ಆದರೆ, ಈ ಎಲ್ಲಾ ಆರೋಪಗಳು ತನಿಖೆಯಲ್ಲಿದ್ದು, ಆರೋಪಿಗಳ ಪಾತ್ರ ಇನ್ನೂ ಸಂಪೂರ್ಣವಾಗಿ ದೃಢಪಟ್ಟಿಲ್ಲ.
ಅಹಮದಾಬಾದ್ಗೆ ಹೋಗಿದ್ದು ಯಾರು?
ಪ್ರಕರಣದಲ್ಲಿ ಮತ್ತೊಂದು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಯಶ್ ಅಹಮದಾಬಾದ್ಗೆ ಹೋಗಿರಲಿಲ್ಲ ಎನ್ನಲಾಗಿದೆ. ಜಿತೇಂದ್ರ ಸೋಮಾನಿ ಆಗಸ್ಟ್ 4ರಂದು ಅಹಮದಾಬಾದ್ಗೆ ತೆರಳಿದ್ದರೆ, ಯಶ್ ಅಸ್ಸಾಂನಲ್ಲೇ ಉಳಿದಿದ್ದ ಎಂದು ಮಾಹಿತಿ ಲಭ್ಯವಾಗಿದೆ. ನಂತರ ಜೋರ್ಹಾಟ್ ಪೊಲೀಸರು ಯಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
