ಮೈಸೂರು: ರಾಜ್ಯ ರಾಜಕಾರಣಕ್ಕೆ ಕಮ್ ಬ್ಯಾಕ್ ಆಗೋ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಅತಿ ದೊಡ್ಡ ಶಾಕ್ ಆಗಿದೆ. ಜನಾರ್ದನರೆಡ್ಡಿಗೂ ಬಿಜೆಪಿಗೂ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ ಅಂತ ಸ್ಪಷ್ಟಪಡಿಸುವ ಮೂಲಕ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ರಾಜ್ಯ ಪ್ರವಾಸದಲ್ಲಿರುವ ಶಾ ಇಂದು ಮೈಸೂರಿನಲ್ಲಿ ನೀಡಿದ ಈ ಹೇಳಿಕೆಯಿಂದಾಗಿ, ರೆಡ್ಡಿ ಬೆಂಬಲಿಗರು ಆಘಾತಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಪರಮಾಪ್ತ ಹಾಗೂ ಶಾಸಕ ಶ್ರೀರಾಮುಲು ದಿಗ್ಭ್ರಾಂತರಾಗಿದ್ದಾರೆ ಅಂತಾ ಹೇಳಲಾಗಿದೆ.
ಈ ಮೂಲಕ ಅಕ್ರಮ ಗಣಿಗಾರಿಕೆ ಪ್ರಕರಣದಿಂದಾಗಿ ಬಳ್ಳಾರಿಗೆ ಕಾಲಿಡಬಾರದೆಂದು ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಮನೆ ಮಾಡಿಕೊಂಡು ಪಕ್ಷ ಬಲವರ್ಧನೆಗೆ ಮುಂದಾಗಿದ್ದ ರೆಡ್ಡಿ ಅವರ ಆಸೆಗೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ತಣ್ಣೀರು ಎರಚಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ, ಅಣ್ಣನಿಗೆ ಪಕ್ಷದ ಹಿರಿಯರಿಂದ ಮೌಖಿಕ ಸೂಚನೆ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಲಿದ್ದಾರೆ ಅಂತ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡಿದ್ದರು. ಆದ್ರೆ ಸೋಮಶೇಖರ್ ರೆಡ್ಡಿ ಹೇಳಿಕೆ ನೀಡುತ್ತಿದ್ದಂತೆಯೇ ಇತ್ತ ಅಮಿತ್ ಶಾ ಮಾತು ಬಳ್ಳಾರಿ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.