ಔರಂಗಬಾದ್: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಐಎಂಐಎಂ ಸಿದ್ಧವಾಗಿದೆ. ಆದರೆ ಅವರು ನಮ್ಮೊಂದಿಗೆ ಕೈಜೋಡಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷದ ಸಂಸದ ಇಮ್ತಿಯಾಜ್ ಜಲೀಲ್ ಹೇಳಿದ್ದಾರೆ.
ರಾಜ್ಯ ಸಚಿವ ಮತ್ತು ಎನ್ಸಿಪಿ ನಾಯಕ ರಾಜೇಶ್ ಟೋಪೆ ಅವರ ನಿವಾಸಕ್ಕೆ ಭೇಟಿ ನೀಡಿದ ಜಲೀಲ್ ಎಐಎಂಐಎಂ ಸಂಘಟನೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗೆ ಎಐಎಂಐಎಂ ಮೈತ್ರಿ ಮಾಡಿಕೊಳ್ಳಲು ಸಿದ್ಧವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಗಳಿಗೆ ಮುಸ್ಲಿಮರ ಮತಗಳು ಬೇಕಿದೆ. ಕಾಂಗ್ರೆಸ್ ಸಹ ತಾನು ಜಾತ್ಯಾತೀತರು ಎನ್ನುತ್ತದೆ. ಹಾಗಾಗಿ ನಾವೂ ಅವರೊಂದಿಗೆ ಕೈಜೋಡಿಸಲು ಸಿದ್ಧರಿದ್ದೇವೆ. ಈಗಾಗಲೇ ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ಗೆ ಗರಿಷ್ಠ ಹಾನಿಯನ್ನುಂಟು ಮಾಡಿದೆ. ಕಾಂಗ್ರೆಸ್ ಒಂದೇ ಒಂದು ಮತವನ್ನು ಗಳಿಸುವ ಮೂಲಕ ತೀವ್ರ ಮುಖಭಂಗ ಎದುರಿಸುವಂತಾಗಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ನಾವು ಬಿಜೆಪಿ ಸೋಲಿಸಲು ಸಿದ್ಧರಿದ್ದೇವೆ ಎಂದು ಜಲೀಲ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಂದೂ-ಮುಸ್ಲಿಂ ಒಟ್ಟಿಗೆ ಇರಲು ಸಾಧ್ಯವಿಲ್ಲ ಅಂತ ಅಂಬೇಡ್ಕರ್ ಹೇಳಿದ್ದರು: ಪ್ರತಾಪ್ ಸಿಂಹ
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದೊಂದಿಗೆ (ಚುನಾವಣೆ) ಎಐಎಂಐಎಂ ಮಾತನಾಡಿದೆ, ಆದರೆ ಅವರಿಗೆ ಮುಸ್ಲಿಮರ ಮತಗಳು ಬೇಕೇ ಹೊರತು ನಮ್ಮ ಪಕ್ಷದ ಮುಖ್ಯಸ್ಥರು ಬೇಕಿಲ್ಲ ಎಂದಿದ್ದಾರೆ.
2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಎರಡು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈಗ ಮೈತ್ರಿ ಮಾಡಿಕೊಂಡರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯನ್ನು ಮಣಿಸಬಹುದು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಗೆ ಮುಸ್ಲಿಮರ ಮತಗಳು ಅವಶ್ಯವಿದ್ದು, ನಾವು ಒಟ್ಟಾಗಿ ಚುನಾವಣೆ ಎದುರಿಸೋಣ ಎಂದು ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಂಜಾಬ್ನಲ್ಲಿ ಆಪ್ ಸರ್ಕಾರ ಸಂಪುಟ ರಚನೆ – 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ಇಲ್ಲಿ ಯಾವುದೇ ಧರ್ಮವೂ ಕೆಟ್ಟದ್ದಲ್ಲ. ಅದನ್ನು ಅನುರಸರಿಸುವ ಜನರು ಒಳ್ಳೆಯವರು ಅಥವಾ ಕೆಟ್ಟವರು ಆಗಿರಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಜಲೀಲ್ ಸಲಹೆ ನೀಡಿದ್ದಾರೆ.