ತಮಿಳು ನಾಡಿನಲ್ಲಿ (Tamil Nadu) ನಟರ ರಾಜಕೀಯ ಪರ್ವ ಶುರುವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಮಲ್ ಹಾಸನ್, ರಜನಿಕಾಂತ್ ನಂತರ ದೊಡ್ಡ ಮಟ್ಟದಲ್ಲಿ ರಾಜಕೀಯ ಪ್ರವೇಶ ಮಾಡುವುದರ ಕುರಿತು ಸುದ್ದಿಯಾಗಿದ್ದ ದಳಪತಿ ವಿಜಯ್ ಅವರದ್ದು. ಈಗಾಗಲೇ ವಿಜಯ್ ರಾಜಕೀಯ ಅಖಾಡಕ್ಕೂ ಇಳಿದಾಯಿತು. ಈ ನಡುವೆ ಮತ್ತೋರ್ವ ನಟ ಕೂಡ ರಾಜಕಾರಣಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿತ್ತು. ಅದು ನಿಜವಾಗುತ್ತಿದೆ.
ಹೌದು, ನಟ ವಿಶಾಲ್ (Vishal) ಕೂಡ ರಾಜಕಾರಣಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿತ್ತು. ರಾಜಕಾರಣವನ್ನು ಗುರಿಯಾಗಿಟ್ಟುಕೊಂಡು ಅವರು ಜನಪರ ಕೆಲಸ ಮಾಡುತ್ತಿದ್ದಾರೆ ಎನ್ನುವ ಚರ್ಚೆ ಕೂಡ ನಡೆದಿತ್ತು. ಅವರ ತಾಯಿ ಹೆಸರಿನಲ್ಲಿ ಫೌಂಡೇಶನ್, ಅಭಿಮಾನಿಗಳ ಕ್ಲಬ್ ಹೆಸರಿನಲ್ಲಿ ಸಮಾಜ ಸೇವೆ ಹೀಗೆ ವಿಶಾಲ್ ಮಾಡುತ್ತಿರುವುದಕ್ಕೆ ರಾಜಕಾರಣವನ್ನು ತಳುಕು ಹಾಕಲಾಗಿತ್ತು.
ಈ ಎಲ್ಲ ಕುರಿತಂತೆ ವಿಶಾಲ್ ಪ್ರತಿಕ್ರಿಯೆ ನೀಡಿದ್ದರು. ರಾಜಕೀಯ ಕನಸು ಇಟ್ಟುಕೊಂಡು ತಾವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿಲ್ಲ. ನನ್ನ ಖುಷಿಗಾಗಿ ಇವೆಲ್ಲವನ್ನೂ ಮಾಡುತ್ತಿರುವೆ. ಅದಕ್ಕೂ ರಾಜಕಾರಣಕ್ಕೂ ತಳುಕು ಹಾಕಬೇಡಿ ಎಂದು ಅವರು ಪತ್ರ ಬರೆದಿದ್ದರು.
ಸದ್ಯಕ್ಕೆ ರಾಜಕಾರಣದ ಬಗ್ಗೆ ಯೋಚನೆ ಮಾಡಿಲ್ಲ. ಮುಂದೆ ಏನು ಅಂತ ಗೊತ್ತಿಲ್ಲ. ಸಮಾಜ ಸೇವೆ ಎಂದಿನಂತೆ ಮುಂದುವರೆಯಲಿದೆ. ತಾಯಿ ಹೆಸರಿನಲ್ಲಿ ಮತ್ತು ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ ಎಂದಿದ್ದರು. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ವಿಶಾಲ್ ರಾಜಕೀಯ ಕ್ಷೇತ್ರಕ್ಕೆ ಬರಲಿದ್ದಾರಂತೆ. ತಮ್ಮದೇ ಪಕ್ಷ ಕಟ್ಟಿ ಆ ಮೂಲಕ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಈಗಾಗಲೇ ಕಮಲ್, ವಿಜಯ್ ತಮ್ಮದೇ ಆದ ಪಕ್ಷ ಕಟ್ಟಿ (Politics Party) ಆ ಮೂಲಕ ರಾಜಕಾರಣದಲ್ಲಿ ಸಕ್ರೀಯರಾಗಿದ್ದಾರೆ. ಆ ಸಾಲಿಗೆ ವಿಶಾಲ್ ಕೂಡ ಸೇರಿಕೊಳ್ಳುತ್ತಿದ್ದಾರೆ.