ಚಿತ್ರದುರ್ಗ: ಹೆಚ್ಚವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ರಾಮಚಂದ್ರರಾವ್ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದ ಘಟನೆ ಚಿತ್ರದುರ್ಗ ತಾಲೂಕಿನ ಕೊಳಾಳ್ ಬಳಿ ನಡೆದಿದೆ.
ಡಿಕ್ಕಿಯ ರಭಸಕ್ಕೆ ಲಾರಿ ಪಲ್ಟಿಯಾಗಿದ್ದು ಚಾಲಕ ಪಾರಾಗಿದ್ದಾನೆ. ಜೊತೆಗೆ ಕಾರಿನಲ್ಲಿದ್ದ ಎಡಿಜಿಪಿ ರಾಮಚಂದ್ರರಾವ್ ಪ್ರಾಣಾಪಾಯದಿಂದ ಪಾರಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ರಾಮಚಂದ್ರರಾವ್ ಅವರು ಕೆಎ 01 ಜಿ-6311 ನಂಬರ್ನ ಇನೋವಾ ಕಾರಿನಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದರು. ಚಿತ್ರದುರ್ಗ ತಾಲೂಕಿನ ಕೊಳಾಳ್ ಬಳಿ ವೇಗವಾಗಿ ಬಂದ ಕೆಎ 08 ಎ 1398 ನಂಬರ್ನ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಲಾರಿ ಪಲ್ಟಿ ಹೊಡೆದು ರಸ್ತೆ ಪಕ್ಕದಲ್ಲಿ ಬಿದ್ದಿದೆ. ತಕ್ಷಣವೇ ಚಾಲಕ ಲಾರಿಯಿಂದ ಜಿಗಿದು ಪಾರಾಗಿದ್ದಾನೆ.
ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.