ನಿನ್ನೆ ನಿಧನರಾಗಿರುವ (Death) ಮಾಜಿ ಐಎಎಸ್ ಅಧಿಕಾರಿ ಹಾಗೂ ನಟ ಕೆ. ಶಿವರಾಂ (K. Shivaram) ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಬಿಡದಿಯ ಉರುಗಹಳ್ಳಿಯಲ್ಲಿ (Urugahalli) ಮಾಡುವುದಾಗಿ ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಶಿವರಾಂ ಅವರ ಅಂತ್ಯಕ್ರಿಯೆಯನ್ನು ಛಲವಾದಿ ಮಹಾಸಭಾದ ಜಾಗದಲ್ಲಿ ಮಾಡಬೇಕು ಎಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದರು. ಸರಕಾರ ಅದಕ್ಕೆ ಸಮ್ಮತಿ ನೀಡದೇ ಇರುವ ಕಾರಣದಿಂದಾಗಿ ಹುಟ್ಟೂರಿಗೆ ಪಾರ್ಥೀವ ಶರೀರವನ್ನು ತಗೆದುಕೊಂಡು ಹೋಗಲಾಗುತ್ತಿದೆ.
ಬೆಳಗ್ಗೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಶಿವರಾಂ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ಶಿವರಾಂ ಅವರ ಅಂತ್ಯ ಸಂಸ್ಕಾರವೂ (Cremation) ನಡೆಯಬೇಕಿತ್ತು. ಜಾಗದ ಗೊಂದಲದಿಂದಾಗಿ ಶಿವರಾಂ ಕುಟುಂಬ ಕಾಯುತ್ತಿತ್ತು.
ಕೆ. ಶಿವರಾಂ ಕುಟುಂಬ ಹಾಗೂ ಅಭಿಮಾನಿಗಳ ಬೇಡಿಕೆಗೆ ಸರ್ಕಾರ ಮಣಿಯದೇ ಇರುವ ಕಾರಣದಿಂದಾಗಿ ಬಿಡದಿಯ ತೋಟದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ. ಶಿವರಾಂ ಅವರ ತಾಯಿಯ ಸಮಾಧಿ ಪಕ್ಕದಲ್ಲೇ ಅಂತ್ಯ ಸಂಸ್ಕಾರ ಮಾಡಲು ತೀರ್ಮಾನ ಮಾಡಲಾಗಿದೆ. ರಾಜ್ಯದ ಎಲ್ಲಾ ಛಲವಾದಿ ಸಂಘಗಳಲ್ಲಿ ನಟ ಶಿವರಾಂ ಅವರ ಪ್ರತಿಮೆ ನಿರ್ಮಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ.