ಲೋಕಸಭೆ ಚುನಾವಣೆ (Lok Sabha Elections) ಸಿನಿಮಾ ನಟರಿಂದಾಗಿ ರಂಗೇರುತ್ತಿದೆ. ಈಗಾಗಲೇ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಕೆಲ ವರ್ಷಗಳಿಂದ ದೂರವಿದ್ದ ಬಾಲಿವುಡ್ ನಟ ಗೋವಿಂದ್ (Govind), ಮತ್ತೆ ರಾಜಕಾರಣಕ್ಕೆ ವಾಪಸ್ಸಾಗಿದ್ದಾರೆ. ಲೋಕಸಮರಕ್ಕೆ ಇಳಿಯುವುದಕ್ಕಾಗಿಯೇ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರ ಶಿವಸೇನೆ (Shiv Sena)ಯನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಕೆಲವು ದಿನಗಳ ಹಿಂದೆಯೇ ಇವರು ಶಿವಸೇನೆ ಸೇರಲಿದ್ದಾರೆ ಎನ್ನುವ ಗುಲ್ಲಿತ್ತು. ಏಕನಾಥ ಶಿಂಧೆ ಅವರನ್ನೂ ಗೋವಿಂದ್ ಅವರ ಭೇಟಿ ಮಾಡಿದ್ದರು. ವಾಯವ್ಯ ಕ್ಷೇತ್ರದಿಂದ ಲೋಕಸಭೆ ಸ್ಪರ್ಧೆಗೆ ಇಳಿಯುವ ಕುರಿತು ಚರ್ಚೆ ಮಾಡಿದ್ದರು. ಆದರೆ, ಆಗ ಅದು ಅಧಿಕೃತವಾಗಿರಲಿಲ್ಲ. ಈಗ ಶಿವಸೇನೆ ಸೇರ್ಪಡೆಗೊಂಡನಂತರ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಹೇಳಲಾಗುತ್ತಿದೆ.
ನಟನಾಗಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಗೋವಿಂದ್, 2004ರಲ್ಲಿ ಉತ್ತರ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ನಿಂದ ಟಿಕೆಟ್ ಪಡೆದುಕೊಂಡು, ಬಿಜೆಪಿಯ ಅಭ್ಯರ್ಥಿ ರಾಮ್ ನಾಯ್ಕ್ ಅವರನ್ನು ಸಾಕಷ್ಟು ಅಂತರದಿಂದ ಸೋಲಿಸಿದ್ದರು. ಗೋವಿಂದ್ ಅವರ ಜನಪ್ರಿಯತೆ ಅದಕ್ಕೆ ಸಾಥ್ ಕೂಡ ನೀಡಿತ್ತು.
ಈಗಾಗಲೇ ವಾಯುವ್ಯ ಮುಂಬೈ ಕ್ಷೇತ್ರದಿಂದ ಉದ್ಭವ್ ಠಾಕ್ರೆ ಬಣದಿಂದ ಅಮೋಲ್ ಕೀರ್ತಿಕರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಇಪ್ಪತ್ತು ವರ್ಷಗಳ ನಂತರ ಮತ್ತೆ ಗೋವಿಂದ್ ರಾಜಕೀಯ ಪ್ರವೇಶ ಮಾಡಿದ್ದರಿಂದ, ಯಾವ ರೀತಿಯಲ್ಲಿ ಪ್ರತಿಸ್ಪರ್ಧೆಗೆ ಠಕ್ಕರ್ ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯ ಗೋವಿಂದ್ ಶಿವಸೇನೆ ಸೇರ್ಪಡೆಯಾಗಿದ್ದಾರೆ. ಆದರೆ, ಟಿಕೆಟ್ ಅವರಿಗೆ ಸಿಗತ್ತಾ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.