ರಾಮನ ಪಾತ್ರವನ್ನು ಮಾಡುವ ಮೂಲಕ ಅಸಂಖ್ಯಾತ ಹೃದಯಗಳಲ್ಲಿ ರಾಮನೇ ಆಗಿ ಉಳಿದಿರುವ ನಟ ಅರುಣ್ ಗೋವಿಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಬಾರಿ ಲೋಕಸಭೆ (Lok Sabha) ಅಖಾಡದಲ್ಲಿ ಅರುಣ್ ಗೋವಿಲ್ (Arun Govil) ಕಾಣಿಸಿಕೊಂಡಿದ್ದು, ಟಿಕೆಟ್ ನೀಡಿದ್ದಕ್ಕಾಗಿ ಭಾರತಿ ಜನತಾ ಪಾರ್ಟಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಕಡೆ ನಟಿ ಕಂಗನಾ ರಣಾವತ್ ಅವರಿಗೂ ಬಿಜೆಪಿಯಿಂದ ಟಿಕೆಟ್ ಸಿಕ್ಕಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut)ಗೆ ತವರು ರಾಜ್ಯ ಹಿಮಾಚಲ ಪ್ರದೇಶದ (Himachal Pradesh) ಮಂಡಿ (Mandi) ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಕಂಗನಾ ಮಂಡಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹಲವು ತಿಂಗಳುಗಳಿಂದ ಕಂಗನಾ ರಣಾವತ್ ರಾಜಕೀಯಕ್ಕೆ (Elections) ಬರುತ್ತಾರೆ ಎನ್ನುವ ಸುದ್ದಿ ಇತ್ತು. ಅವರು ಕೂಡ ಕೃಷ್ಣ ಕಣ್ಬಿಟ್ಟರೆ ರಾಜಕೀಯಕ್ಕೆ ಬರೋದು ದೊಡ್ಡ ವಿಷಯವೇ ಅಲ್ಲ ಎಂದೂ ಹೇಳಿದ್ದರು. ಜೊತೆಗೆ ರಾಜಕೀಯ ಮುಖಂಡರನ್ನು ಭೇಟಿ ಮಾಡುವ ಮೂಲಕ ಟಿಕೆಟ್ ಬೇಡಿಕೆಯನ್ನೂ ಇಟ್ಟಿದ್ದರು.
ಇದೀಗ ಕೊನೆಗೂ ಕಂಗನಾಗೆ ಟಿಕೆಟ್ ಘೋಷಣೆ ಆಗಿದೆ. ಇಂದಿನಿಂದ ಮಂಡಿ ಕ್ಷೇತ್ರದಾದ್ಯಂತ ನಟಿ ಪ್ರವಾಸ ಮಾಡಲಿದ್ದಾರೆ. ಇಂದು ಮಂಡಿ ಕ್ಷೇತ್ರದ ಮುಖಂಡರ ಜೊತೆ ಭೇಟಿಗಳು ನಿಗದಿ ಆಗಿವೆ. ಅಧಿಕೃತವಾಗಿ ಇಂದಿನಿಂದ ಸಕ್ರೀಯ ರಾಜಕಾರಣದಲ್ಲಿ ಕಂಗನಾ ಇರಲಿದ್ದಾರೆ.