ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಆ್ಯಸಿಡ್ ದಾಳಿ ನಡೆದಿದೆ. ಸ್ನೇಹಿತನಿಂದ ಸ್ನೇಹಿತನ ಮೇಲೆಯೇ ಆ್ಯಸಿಡ್ ದಾಳಿ ಮಾಡಿರುವ ಘಟನೆ ಬೆಂಗಳೂರಿನ ಕಬ್ಬನ್ ಪೇಟೆ 10ನೇ ಕ್ರಾಸ್ನಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಯುವತಿ ಮೇಲೆ ಯುವಕನೊಬ್ಬ ಆ್ಯಸಿಡ್ ದಾಳಿ ಮಾಡಿ ವಿಕೃತಿ ಮೆರೆದಿದ್ದ. ಇದಿನ್ನೂ ಮಾಸದೇ ಹಾಗೇ ಉಳಿದಿರುವಾಗಲೇ ಮತ್ತೊಂದು ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಜನತಾ ಅದಕ್ ತನ್ನ ಸ್ನೇಹಿತನಿಗೆ ಆ್ಯಸಿಡ್ ಎರಚಿದ್ದಾನೆ. ಜನತಾ ಅದಕ್ ಹಾಗೂ ಸಂತ್ರಸ್ತ ಬೆಳ್ಳಿ ಪಾಲಿಶ್ ಅಂಗಡಿಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಆದರೆ ಭಾನುವಾರ ರಾತ್ರಿ ಇಬ್ಬರ ನಡುವೆ ಜಗಳವಾಗಿತ್ತು. ಜನತಾ ಅದಕ್ ಹಾಗೂ ಸಂತ್ರಸ್ತ ಕುಡಿದು ಗಲಾಟೆ ಮಾಡಿಕೊಂಡಿದ್ದರು.
ಈ ವೇಳೆ ಸಂತ್ರಸ್ತ ಮೊಬೈಲ್ನಲ್ಲಿ ವೀಡಿಯೋ ಮಾಡಲು ಮುಂದಾಗಿದ್ದ. ಇದರಿಂದ ಕೋಪಗೊಂಡ ಜನತಾ ಅದಕ್ ಬೆಳ್ಳಿ ಪಾಲಿಶ್ ಮಾಡಲು ತಂದಿದ್ದ ಡೈಲೂಟ್ ಆ್ಯಸಿಡ್ ಎರಚಿ ಕೃತ್ಯವೆಸಗಿದ್ದಾನೆ. ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಬೆಂಬಲ ಕೇಳಿದ ರೇವಣ್ಣ
ಘಟನೆಯಲ್ಲಿ ಸಂತ್ರಸ್ತನ ಮುಖ, ಎದೆ ಗಾಯವಾಗಿದ್ದು, ಶೇ.30ರಷ್ಟು ಸುಟ್ಟಿದೆ. ಸಂತ್ರಸ್ತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜನತಾ ಅದಕ್ನನ್ನು ಮೈಸೂರು ಬಳಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಅತಿ ದೊಡ್ಡ ಕೂಗು ಮಾರಿ ಅಂದ್ರೆ ಅದು ಸಿದ್ದರಾಮಯ್ಯ: ಪ್ರತಾಪ್ ಸಿಂಹ