ಯಾದಗಿರಿ: ಎರಡು ಲಾರಿಗಳು ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ 9 ಮಂದಿ ಮೃತಪಟ್ಟ ಘೋರ ದುರಂತ ಯಾದಗಿರಿ ತಾಲೂಕಿನ ರಾಮಸಮುದ್ರದ ಬಳಿ ನಡೆದಿದೆ.
ಮೃತರನ್ನು ಯಾದಗಿರಿ ತಾಲೂಕಿನ ಗಣಪೂರ ನಿವಾಸಿಗಳಾದ ಸಾಬಣ್ಣ ಮಣಿಗೇರಿ(55), ವಿಷ್ಣು ಮಣಿಗೇರಿ(15), ಲಕ್ಷ್ಮೀ ಮಣಿಗೇರಿ(12), ಸಿಂಚನಾ(12), ಆಫ್ರೀನಾ(15), ತಿಪ್ಪಣ್ಣ(60), ಬನ್ನಪ್ಪ(45), ಶಂಕ್ರಮ್ಮ(50) ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ನಡೆದಿದ್ದು, ಗಣಪುರ ಗ್ರಾಮದ ಮಣಿಗೇರಿ ಕುಟುಂಬವು ಶಹಾಪುರ ನಗರದಲ್ಲಿ ನಿಶ್ಚಿತಾರ್ಥ ಕಾರ್ಯ ಮುಗಿಸಿ ತಮ್ಮೂರಿಗೆ ಹಿಂದಿರುವ ವೇಳೆ ದುರ್ಘಟನೆ ನಡೆದಿದೆ. ರಾಯಚೂರಿನ ಶಕ್ತಿನಗರದಿಂದ ಹಾರು ಬೂದಿ ತುಂಬಿಕೊಂಡು ವಾಡಿ ಪಟ್ಟಣಕ್ಕೆ ಹೊರಟಿದ್ದ ಲಾರಿಯು, ಎದುರಿನಂದ ನಿಶ್ಚಿತಾರ್ಥ ಕಾರ್ಯ ಮುಗಿಸಿಕೊಂಡು ಸುಮಾರು 60ಕ್ಕೂ ಹೆಚ್ಚು ಜನರಿದ್ದ ಲಾರಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 8 ಜನ ಸಾವನಪ್ಪಿದ್ದಾರೆ. 44 ಕ್ಕೂ ಹೆಚ್ಚು ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಒಂದೇ ಕುಟುಂಬದ 3 ಜನರು ಮೃತಪಟ್ಟಿದ್ದು, ಬಾಳಿ ಬದುಕಬೇಕಾದ ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ.
ಗಾಯಾಳುಗಳನ್ನು ಕೂಡಲೇ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಪ್ರಥಮ ಚಿಕಿತ್ಸೆ ನಂತರ ರಾಯಚೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೊಬ್ಬ ಸಾವನಪ್ಪಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ.
ಯಾದಗಿರಿ ಜಿಲ್ಲಾಧಿಕಾರಿ ಖುಷ್ಬೂ ಗೋಯಲ್, ಪೊಲೀಸ್ ವರಿಷ್ಠಾಧಿಕಾರಿ ಎಡಾ ಮಾರ್ಟೀನ್ ಸೇರಿದಂತೆ ಹಲವಾರು ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಕುರಿತು ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಸಣ್ಣ ಸಣ್ಣ ಮಕ್ಕಳೂ ಕೂಡಾ ಗಂಭೀರ ಗಾಯಗಳಾಗಿ ನರಳಾಡುವ ದೃಶ್ಯಗಳು ಮಾತ್ರ ಸಮಯವನ್ನು ಶಪಿಸುವಂತೆ ಮಾಡಿದೆ.