ನವದೆಹಲಿ: ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಚಾರದ ಕಿಂಗ್ ಪಿನ್ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಎಂದು ಜಾರಿ ನಿರ್ದೇಶನಾಲಯ (ED) ಆರೋಪಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯಕ್ಕೆ ಆಪ್ ನಾಯಕರು ತಿರುಗೇಟು ನೀಡಿದ್ದಾರೆ. ಚುನಾವಣಾ ಬಾಂಡ್ (Electoral Bonds) ಮೂಲಕ ಬಿಜೆಪಿಗೆ ಹಣ ನೀಡಿದ ವ್ಯಕ್ತಿಯಿಂದ ಪಡೆದ ಮಾಹಿತಿ ಮೇರೆಗೆ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವೆ ಅತಿಶಿ (Atishi), ಅಬಕಾರಿ ನೀತಿ ಹಗರಣದಲ್ಲಿ, ಕೇಂದ್ರೀಯ ತನಿಖಾ ದಳ (CBI) ಮತ್ತು ಜಾರಿ ನಿರ್ದೇಶನಾಲಯ ತನಿಖೆಗಳು ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಈ 2 ವರ್ಷಗಳ ತನಿಖೆಯಲ್ಲಿ ಒಂದು ಪ್ರಶ್ನೆ ಮತ್ತೆ-ಮತ್ತೆ ಉದ್ಭವಿಸುತ್ತಿದೆ. ಹಣದ ಜಾಡು ಎಲ್ಲಿದೆ? ಹಣ ಎಲ್ಲಿಗೆ ಹೋಯಿತು? ಆಪ್ ಪಕ್ಷದ ಯಾವುದೇ ನಾಯಕ, ಮಂತ್ರಿ ಅಥವಾ ಕಾರ್ಯಕರ್ತರಿಂದ ಅಪರಾಧದ ಆದಾಯವನ್ನು ವಸೂಲಿ ಮಾಡಲಾಗಿಲ್ಲ, ಹಾಗಿದ್ದಾಗ ಹಣ ಎಲ್ಲಿ ಹೋಯಿತು? ಎಂದು ಪ್ರಶ್ನೆ ಮಾಡಿದ್ದಾರೆ.
ಶರತ್ ಚಂದ್ರ ರೆಡ್ಡಿ ಎಂಬ ವ್ಯಕ್ತಿಯ ಹೇಳಿಕೆ ಆಧರಿಸಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಶರತ್ ಚಂದ್ರ ರೆಡ್ಡಿ ಅರಬಿಂದೋ ಫಾರ್ಮಾದ ಮಾಲೀಕರು ಮತ್ತು ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿಗೆ ಹಣ ಪಾವತಿಸಿದವರು ಎಂದು ಅತಿಶಿ ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರಶ್ನೆಗಾಗಿ ಹಣ ಪಡೆದ ಆರೋಪ – ಮಹುವಾ ಮೊಯಿತ್ರಾ ಮನೆಯಲ್ಲಿ ಸಿಬಿಐ ಶೋಧ
ನವೆಂಬರ್ 9, 2022 ರಂದು ರೆಡ್ಡಿ ಅವರನ್ನು ವಿಚಾರಣೆಗಾಗಿ ಕರೆಸಲಾಗಿತ್ತು. ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಲಿಲ್ಲ ಅಥವಾ ಮಾತನಾಡಲಿಲ್ಲ ಮತ್ತು ಆಪ್ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ಹೇಳಿಕೆ ಬೆನ್ನಲೆ ಅವರನ್ನು ಇಡಿ ಬಂಧಿಸಿ ಹಲವು ತಿಂಗಳು ಜೈಲಿನಲ್ಲಿದ್ದ ನಂತರ ಹೇಳಿಕೆ ಬದಲಿಸಿದ ಅವರು, ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಅಬಕಾರಿ ನೀತಿ ವಿಚಾರವಾಗಿ ಮಾತನಾಡಿದ್ದೇನೆ ಎಂದು ಹೇಳಿದರು. ಅವರು ಹೇಳಿದ ತಕ್ಷಣ ಜಾಮೀನು ಸಿಕ್ಕಿದೆ ಎಂದು ದೂರಿದ್ದಾರೆ.
ಸಚಿವ ಸೌರಭ್ ಭಾರದ್ವಾಜ್ ಮಾತನಾಡಿ, ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಚರ್ಚೆ ಪ್ರಾರಂಭವಾದಾಗಿನಿಂದ, ಬಿಜೆಪಿ, ಎಸ್ಬಿಐ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವು ವಿವರಗಳನ್ನು ಬಹಿರಂಗಪಡಿಸದಿರಲು ಪ್ರಯತ್ನಿಸುತ್ತಿದೆ. ಆದರೀಗ ಈಗ ಅದನ್ನ ಬಹಿರಂಗಪಡಿಸಲಾಗಿದೆ, ಇದು ವಿವಿಧ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2047ಕ್ಕೆ ಎಕ್ಸ್ಪ್ರೆಸ್ವೇಗಳ ಅಭಿವೃದ್ಧಿಗೆ ಸರ್ಕಾರ ಮಾಸ್ಟರ್ಪ್ಲಾನ್