ನವದೆಹಲಿ:ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ನಿರ್ದೇಶನದ ಮೇರೆಗೆ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (AAP) ನಾಯಕಿ ಸ್ವಾತಿ ಮಲಿವಾಲ್ (Swati Maliwal) ಸೋಮವಾರ ಆರೋಪಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ದೆಹಲಿ (Delhi) ಸಿಎಂ ನಿವಾಸದಿಂದ ಪೊಲೀಸ್ ಕಂಟ್ರೋಲ್ ರೂಂಗೆ (PCR) ಮೊಬೈಲಿನಿಂದ ಎರಡು ಕರೆಗಳು ಬಂದಿದೆ. ಬೆಳಗ್ಗೆ 9:34 ರ ಸುಮಾರಿಗೆ ಮೊದಲ ಕರೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮೊಬೈಲ್ ಸಂಖ್ಯೆ ಸ್ವಾತಿ ಮಲಿವಾಲ್ ಅವರಿಗೆ ಸಂಬಂಧಿಸಿದ ಸಂಖ್ಯೆಯಾಗಿದೆ ಎಂದು ವರದಿ ತಿಳಿಸಿದೆ.
ಹಲ್ಲೆಯ ಬಗ್ಗೆ ಸಿಎಂ ನಿವಾಸ ಅಥವಾ ಆಪ್ ಆಗಲಿ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸ್ ಠಾಣೆಯಲ್ಲಿರುವ ಪುಸ್ತಕದಲ್ಲಿ ದೂರು ದಾಖಲಾಗಿದೆ. ಈ ವಿಚಾರದ ಬಗ್ಗೆ ಸ್ವಾತಿ ಮಲಿವಾಲ್ ಇಲ್ಲಿಯವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಸ್ವಾತಿ ಮಲಿವಾಲ್ ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆಯಾಗಿದ್ದು ರಾಜ್ಯಸಭಾ ಸದಸ್ಯರಾಗಿದ್ದಾರೆ. ಇದನ್ನೂ ಓದಿ: 1998: ಮತ್ತೆ ದಿಲ್ಲಿ ಗದ್ದುಗೆಯೇರಿದ ವಾಜಪೇಯಿ – ಕರ್ನಾಟಕದಲ್ಲಿ ಬಿಜೆಪಿ ಎರಡಂಕಿಗೆ ಜಿಗಿತ
ಸ್ವಾತಿ ಮಲಿವಾಲ್ ಮಹಿಳಾ ಆಯೋಗದ ಅಧ್ಯಕ್ಷರಾಗಿದ್ದಾಗ 223 ಸಿಬ್ಬಂದಿಯನ್ನು ನೇಮಿಸಿದ್ದರು. 40 ಹುದ್ದೆಗಳು ಮಂಜೂರಾಗಿದ್ದರೂ 223 ಮಂದಿಯನ್ನು ಅನುಮತಿ ಇಲ್ಲದೆ ಅಕ್ರಮವಾಗಿ ನೇಮಕಾತಿ ಮಾಡಿದ್ದಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ 223 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದ್ದರು.