ಉಡುಪಿ: ಜಿಲ್ಲೆಯಲ್ಲಿ ಮಾನವೀಯತೆ ಮರೆಸುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಮೈಮೇಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೇ 17ರಂದು ಕೊಲ್ಲೂರು ಸಮೀಪದ ದಳಿಯಲ್ಲಿ ನಡೆದಿದ್ದ ಅಪಘಾತದ ಬಳಿಕ ಈ ಘಟನೆ ನಡೆದಿದ್ದು, ಮೃತ ಮಹಿಳೆಯ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮೇ 17ರಂದು ಕೊಲ್ಲೂರು ಸಮೀಪದ ದಳಿಯಲ್ಲಿ ಕೇರಳ ಮೂಲದ ಪ್ರವಾಸಿಗರನ್ನು ಹೊತ್ತ ಜೀಪಿಗೆ ಮೀನು ಸಾಗಾಟದ ಇನ್ಸುಲೇಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ಬೆಂಗಳೂರು – ಚೆನ್ನೈ ಎಕ್ಸ್ಪ್ರೆಸ್ ವೇಯಲ್ಲಿ ಡಿವೈಡರ್ಗೆ ಇನ್ನೋವಾ ಕಾರು ಡಿಕ್ಕಿ – ಬಾಲಕ ಸಾವು

ಮೃತರಾದವರಲ್ಲಿ ಕೇರಳ ಮೂಲದ ಜ್ಯೋತಿ ಹಾಗೂ ಅರಿಯಾ ಅನೂಫ್ ಸೇರಿದ್ದರು. ಅಪಘಾತದ ವೇಳೆ ಮೃತಪಟ್ಟ ಜ್ಯೋತಿ ಅವರ ಮೈಮೇಲಿದ್ದ ಸುಮಾರು 18 ಗ್ರಾಂ ಚಿನ್ನಾಭರಣಗಳು ನಾಪತ್ತೆಯಾಗಿರುವ ಆರೋಪ ಕೇಳಿಬಂದಿತ್ತು. ಅಪಘಾತದ ಗೊಂದಲದ ನಡುವೆ ಸ್ಥಳದಲ್ಲೇ ಯಾರೋ ಚಿನ್ನಾಭರಣ ಕಳವು ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಘಟನೆ ಬಗ್ಗೆ ಮೃತ ಮಹಿಳೆಯ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ನಡೆದ ಸುಮಾರು ಒಂದು ವಾರದ ಬಳಿಕ ಜ್ಯೋತಿ ಕುಟುಂಬಸ್ಥರು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಚಿನ್ನಾಭರಣಗಳನ್ನು ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿ ಚಿನ್ನಾಭರಣಗಳನ್ನು ಬಂಧಿಸಿದ್ದಾರೆ. ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆಯ ನಿವಾಸಿ ಹೇಮಂತ್ (40) ಬಂಧಿತ ಆರೋಪಿ. ಈತನಿಂದ 3.910 ಗ್ರಾಂ ತೂಕದ ಉಂಗುರ, 3.450 ಗ್ರಾಂ ತೂಕದ ಬಳೆ ಹಾಗೂ 7.160 ಗ್ರಾಂ ತೂಕದ ಚಿನ್ನದ ಸರ ಸೇರಿದಂತೆ ಒಟ್ಟು ಸುಮಾರು 2.07 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ಅಕ್ರಮ ಮರ ಸಾಗಣೆ ಜಾಲ ಭೇದಿಸಿದ ಅರಣ್ಯ ಇಲಾಖೆ – 28 ಲಕ್ಷ ಮೌಲ್ಯದ ಬೀಟೆ ಮರ ಸಹಿತ ಲಾರಿ ಜಪ್ತಿ
