– ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಕುತೂಹಲ
– ಮಧ್ಯರಾತ್ರಿ ಫಡ್ನವೀಸ್ ನಿವಾಸದಲ್ಲಿ ರಹಸ್ಯ ಸಭೆ
ಮುಂಬೈ: ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ (Women’s Reservation Bill) ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ (Delimitation Bill) ಶರದ್ ಪವಾರ್ ಅವರ ಎನ್ಸಿಪಿ ಬಣ ಬೆಂಬಲ ನೀಡುವ ಸಾಧ್ಯತೆಯಿದೆ.
ಆಡಳಿತರೂಢ ಎನ್ಡಿಎ (NDA) ಒಕ್ಕೂಟವನ್ನು ಅಧಿಕೃತವಾಗಿ ಸೇರದೆ ವಿಷಯ ಆಧಾರಿತವಾಗಿ ಈ ಪ್ರಮುಖ ಮಸೂದೆಗಳ ಪರವಾಗಿ ಮತ ಚಲಾಯಿಸಲು ಪವಾರ್(Sharad Pawar) ಕ್ಯಾಂಪ್ ನಿರ್ಧರಿಸಿದೆ ಎಂದು ಎಂದು ಮೂಲಗಳು ತಿಳಿಸಿವೆ.
ಕೇವಲ ಮಸೂದೆಗೆ ಬೆಂಬಲ
ಸದ್ಯ 9 ಸಂಸದರು(8 ಲೋಕಸಭೆ ಮತ್ತು ಮತ್ತು 1 ರಾಜ್ಯಸಭೆ ಸದಸ್ಯ) ಹೊಂದಿರುವ ಶರದ್ ಪವಾರ್ ಬಣವು ಎನ್ಡಿಎ ಮೈತ್ರಿಕೂಟದ ಭಾಗವಾಗುವ ಯಾವುದೇ ಯೋಜನೆ ಹೊಂದಿಲ್ಲ. 2023 ರಲ್ಲಿ ಅಜಿತ್ ಪವಾರ್ ಬಂಡಾಯ ಎದ್ದು ಮಹಾಯುತಿ ಸರ್ಕಾರ ಸೇರಿದ ಬಳಿಕ ಎನ್ಸಿಪಿ ಎರಡು ಭಾಗವಾಗಿ ಒಡೆದಿತ್ತು. ಈಗ ಮತ್ತೆ ಪಕ್ಷದಲ್ಲಿ ಸದ್ಯ ಆಡಳಿತ ಪಕ್ಷದೊಂದಿಗೆ ನಿಕಟ ಸಹಕಾರ ಹೊಂದಬೇಕು ಎಂಬ ಚರ್ಚೆಗಳ ನಡೆಯುತ್ತಿದೆ.
ಈ ಸಂದರ್ಭದಲ್ಲೇ ಪಕ್ಷ ಮತ್ತೊಂದು ಹೋಳಾಗುವುದನ್ನು ತಡೆಯಲು ಮತ್ತು ಆಂತರಿಕ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು ಶರದ್ ಪವಾರ್ ಅವರು ಕೇವಲ ಈ ನಿರ್ದಿಷ್ಟ ಮಸೂದೆಗಳಿಗೆ ಮಾತ್ರ ಬೆಂಬಲ ನೀಡುವ ಸೀಮಿತ ಕಾರ್ಯತಂತ್ರಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ತಡರಾತ್ರಿ ರಹಸ್ಯ ಸಭೆ
ಮಂಗಳವಾರ ತಡರಾತ್ರಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Fadnavis) ಅವರ ಅಧಿಕೃತ ನಿವಾಸದಲ್ಲಿ ನಡೆದ ಸರಣಿ ಸಭೆಗಳು ಮಹಾರಾಷ್ಟ್ರ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿವೆ. ಇದನ್ನೂ ಓದಿ: ರಾಮಭಕ್ತರ ಮೇಲೆ ಗುಂಡು ಹಾರಿಸಿದವರಿಂದ ಇಂದು ಉಪದೇಶ- ಎಸ್ಪಿ ವಿರುದ್ಧ ಯೋಗಿ ಕಿಡಿ
ಬೆನ್ನುಬೆನ್ನಿಗೆ ನಡೆದ ಈ ರಹಸ್ಯ ಸಭೆಗಳ ಅಧಿಕೃತ ಕಾರ್ಯಸೂಚಿಯ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯಾಗಲಿ ಅಥವಾ ಸಭೆಯಲ್ಲಿ ಭಾಗವಹಿಸಿದ ನಾಯಕರಾಗಲಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇದು ಎನ್ಸಿಪಿಯ ಎರಡೂ ಬಣಗಳನ್ನು ಮತ್ತೆ ಒಂದು ಮಾಡುವ ಪ್ರಯತ್ನವೇ ಅಥವಾ ಮಹಾರಾಷ್ಟ್ರದಲ್ಲಿ ಹೊಸ ರಾಜಕೀಯ ಮರುಜೋಡಣೆಯ ಮುನ್ನುಡಿಯೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.
ಸುಪ್ರಿಯಾ ಸುಳೆ ಹೇಳಿದ್ದೇನು?
ಕ್ಷೇತ್ರ ಪುನರ್ ವಿಂಗಡಣೆ (Delimitation) ಪ್ರಕ್ರಿಯೆಯಿಂದಾಗಿ ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದ ರಾಜ್ಯಗಳಿಗೆ ಸಂಸತ್ತಿನಲ್ಲಿ ಪ್ರಾತಿನಿಧ್ಯ ಕಡಿಮೆ ಆಗಬಹುದು ಎಂಬ ಆತಂಕವಿದೆ. ಹೀಗಾಗಿ, ತಮ್ಮ ಪಕ್ಷವು ಮಹಾರಾಷ್ಟ್ರದ ಹಿತಾಸಕ್ತಿಗೆ ಧಕ್ಕೆಯಾಗದಂತಹ ನಿರ್ಧಾರವನ್ನು ಮಾತ್ರ ತೆಗೆದುಕೊಳ್ಳಲಿದೆ ಎಂದು ಸುಪ್ರಿಯಾ ಸುಳೆ ಸ್ಪಷ್ಟಪಡಿಸಿದ್ದಾರೆ.
ಜುಲೈ 20 ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಲೋಕಸಭೆಯ ಸೀಟುಗಳ ಸಂಖ್ಯೆಯನ್ನು 850 ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಹೊಂದಿರುವ ಸಂವಿಧಾನದ (131 ನೇ ತಿದ್ದುಪಡಿ) ಮಸೂದೆಯನ್ನು ಮಂಡಿಸಲು ಸರ್ಕಾರ ಸಜ್ಜಾಗಿದೆ.
