ಕೊಪ್ಪಳ: ಕಳೆದ 15 ವರ್ಷದಿಂದ ಕೇವಲ ಮಂಗಳಾಪೂರ ಗ್ರಾಮಕ್ಕೆ ಸೀಮಿತವಾಗಿದ್ದ ಭೂಮಿ ವಿವಾದ ಈಗ ರಾಜ್ಯಾದ್ಯಂತ ಸುದ್ದಿಯಾಗಿದೆ.
ಕೊಪ್ಪಳ ತಾಲೂಕಿನ ಮಂಗಳಾಪೂರ ಹೊರ ಹೊಲಯದಲ್ಲಿನ 2.27 ಎಕರೆ ಭೂಮಿ ಕಳೆದ 40 ವರ್ಷದಿಂದ ವಿವಾದದಲ್ಲಿದೆ. ಈ ಜಾಗ ಸರ್ಕಾರಿ ದಾಖಲೆಯಲ್ಲಿ ಗಾವ್ ಠಾಣಾ ಎಂದಿದೆ. ಕಳೆದ 40 ವರ್ಷದಿಂದ ಈ ಜಾಗದಲ್ಲಿ ಒಂದು ಧರ್ಮೀಯರು ಶವ ಸಂಸ್ಕಾರ ಮಾಡುತ್ತಿದ್ದಾರೆ. ಈ ಭೂಮಿಯ ಅರ್ಧ ಜಾಗವನ್ನು ಹಿಂದೂಗಳಿಗೆ ಶವ ಸಂಸ್ಕಾರಕ್ಕೆ ಬಿಟ್ಟು ಕೊಡುವಂತೆ ಬೇಡಿಕೆ ಇಟ್ಟಿದ್ದು ವಿವಾದಕ್ಕೆ ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಸರ್ಕಾರಿ ನೌಕರರು ಬೇಕಾಬಿಟ್ಟಿ ಸಾಮಾಜಿಕ ಜಾಲತಾಣ ಬಳಕೆ ಮಾಡಿದರೆ ಹುಷಾರ್!
ಒಟ್ಟು 2 ಎಕರೆ 27 ಗುಂಟೆ ಭೂಮಿಯ ಪೈಕಿ ಅಡಿ ಜಾಗವನ್ನೂ ಕೊಡುವುದಿಲ್ಲ ಎಂದು ಹೇಳಿದಾಗ, ಹಿಂದೂ ಧರ್ಮೀಯರು 2007 ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಇನ್ನು 2011ರಲ್ಲಿ ವಿವಾದಿತ ಜಾಗವನ್ನು ವಕ್ಫ್ ಬೋರ್ಡ್ಗೆ ಹಸ್ತಾಂತರಿಸಿ ಪಹಣಿ ತಿದ್ದುಪಡಿ ಮಾಡಲಾಗಿದೆ. ಈ ಎಲ್ಲಾ ಕಾರಣದಿಂದ ಇದು ಹಿಂದೂಗಳಿಗೆ ಸೇರಿದ ಭೂಮಿ ಎಂದು ವಾದಿಸಲು ಸಾಕ್ಷ್ಯ ಹುಡುಕಲು ಮುಂದಾಗಿದ್ದರು.
ಕಳೆದ 2 ದಿನದಿಂದ ನೂರಾರು ಹನುಮ ಮಾಲಾಧಾರಿಗಳು ಹುಡುಕಾಟ ನಡೆಸಿದ್ದು, ನಿನ್ನೆ ವಿವಾದಿತ ಭೂಮಿಯಲ್ಲಿ ಆಂಜನೇಯ ದೇವಸ್ಥಾನದ ಕೊಂಡ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಹಿಂದೂಪರ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆ ಹಳ್ಳಿ ಭೇಟಿ ನೀಡಿ, ಪತ್ತೆಯಾದ ಕೊಂಡಕ್ಕೆ ಪೂಜೆ ಸಲ್ಲಿಸಿದ್ದಾರೆ. ಆ ಮೂಲಕ ಗ್ರಾಮಕ್ಕೆ ಸೀಮಿತವಾಗಿದ್ದ ವಿವಾದ ಈಗ ರಾಜ್ಯಾದ್ಯಂತ ಸುದ್ದಿಯಾಗಿದೆ. ಇದನ್ನೂ ಓದಿ: ಸರ್ಕಾರಿ ನೌಕರರು ಬೇಕಾಬಿಟ್ಟಿ ಸಾಮಾಜಿಕ ಜಾಲತಾಣ ಬಳಕೆ ಮಾಡಿದರೆ ಹುಷಾರ್!
ವಿವಾದ ದೊಡ್ಡದಾಗುವ ಮಾಹಿತಿ ತಿಳಿದ ಪೊಲೀಸರು, ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಕೋರ್ಟ್ ಆದೇಶ ಬರುವವರೆಗೂ ಯಾರೂ ವಿವಾದಿತ ಭೂಮಿಗೆ ಭೇಟಿ ನೀಡದಂತೆ ಸೂಚನೆ ನೀಡಿದ್ದಾರೆ. ಸದ್ಯ ಎಲ್ಲರ ಚಿತ್ತ ಕೋರ್ಟ್ ಆದೇಶದತ್ತ ನೆಟ್ಟಿದೆ.