ಕಾರವಾರ: ಲಾರಿಯೊಂದು ಹೂವಿನ ವ್ಯಾಪಾರಿ ಮೇಲೆ ಹರಿದ ಪರಿಣಾಮ ವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಈ ಅಪಘಾತ ಉತ್ತರಕನ್ನಡ ಜಿಲ್ಲೆಯ ಕುಮಟಾ ರಾಷ್ಟ್ರೀಯ ಹೆದ್ದಾರಿ 66ರ ಮೂರೂರು ಕ್ರಾಸ್ ಬಳಿ ನಡೆದಿದೆ. ಮೃತ ಹೂವಿನ ವ್ಯಾಪಾರಿಯನ್ನು ಫಾರುಖ್ ಶೇಖ್ ಎಂದು ಗುರುತಿಸಲಾಗಿದ್ದು, ಯಾದಗಿರಿ ಮೂಲದವರು ಎಂದು ತಿಳಿದು ಬಂದಿದೆ.
ಹೂ ವ್ಯಾಪಾರ ಮಾಡಲೆಂದು ಯಾದಗಿರಿಯಿಂದ ಬಂದಿದ್ದ ಮೃತ ಫಾರುಖ್ ಅವರು ರಸ್ತೆ ಬದಿಯಲ್ಲಿ ನಿಂತಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿಯಾಗಿ ಬಿದ್ದಿದ್ದಾರೆ. ಈ ವೇಳೆ ಲಾರಿ ಫಾರುಖ್ ಮೇಲೆ ಹರಿದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನೆಯ ಬಳಿಕ ಲಾರಿ ಚಾಲಕ ಗುಜರಾತ್ ಮೂಲದ ಹಿಮತ್ ಸಿಂಹ ಚೌಹಾಣ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಲಾರಿಯಲ್ಲಿದ್ದ ಹೀಮಾತಾಜ್ ಠಾಕೂರ್, ತನುಜ್ ಠಾಕೂರ್ ಗಾಯಗಳಾಗಿದ್ದು, ಸದ್ಯ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಲಾರಿ ಅಂಕೋಲಾ ಮಾರ್ಗದಿಂದ ಹೊನ್ನಾವರ ಕಡೆಗೆ ಸಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.