ಹೊಂಬಾಳೆ ಫಿಲ್ಮ್ಸ್ (Hombale Films) ಮೂಲಕ ಭಾರತೀಯ ಸಿನಿಮಾ ರಂಗಕ್ಕೆ ಉತ್ತಮ ಚಿತ್ರಗಳನ್ನು ನೀಡಿರುವ ನಿರ್ಮಾಪಕ ವಿಜಯ್ ಕಿರಗಂದೂರು (Vijay Kirgandur), ಇಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯಲ್ಲಿ ಸಿನಿಮಾ ರಂಗದ ಕುರಿತು ಹಲವು ವಿಚಾರಗಳನ್ನು ಸಚಿವರ ಜೊತೆ ಹಂಚಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಅದೊಂದು ಅತ್ಯುತ್ತಮವಾದ ಭೇಟಿ ಆಗಿತ್ತು ಎಂದೂ ವಿಜಯ್ ಬರೆದುಕೊಂಡಿದ್ದಾರೆ.
ಕೇಂದ್ರ ಸಚಿವರನ್ನು ಭೇಟಿ ಮಾಡಿದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಜಯ್ ಕಿರಗಂದೂರ, ‘ಅನುರಾಗ್ ಠಾಕೂರ್ (Anurag Thakur) ಜೊತೆ ಭಾರತೀಯ ಸಿನಿಮಾ ರಂಗದ ಕುರಿತು ಚರ್ಚಿಸಲಾಯಿತು. ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವಂತಹ, ಅದನ್ನು ಮುಂದುವರೆಸಿಕೊಂಡು ಹೋಗು ಸಾಧ್ಯತೆಯ ಕುರಿತಾಗಿ ಮಾತನಾಡಲಾಯಿತು. ಭಾರತೀಯ ಸಿನಿಮಾ ರಂಗದ ಕುರಿತಾದ ಸೂಕ್ಷ್ಮ ಒಳನೋಟ ಈ ವಿಷಯದಲ್ಲಿ ಇತ್ತು’ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ
ಕನ್ನಡ ಸಿನಿಮಾ ರಂಗಕ್ಕೆ ಗೆಲುವಿನ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ವಿಜಯ್ ಕಿರಗಂದೂರ ಅವರದ್ದು. ಇವರ ಬ್ಯಾನರ್ ನಲ್ಲಿ ಮೂಡಿ ಬಂದ ಕೆಜಿಎಫ್ 2 ಸಿನಿಮಾ ಐತಿಹಾಸಿಕ ದಾಖಲೆ ಮಾಡಿತು. ಅಲ್ಲದೇ, ಈಗ ಬಿಡುಗಡೆ ಆಗಿರುವ ಕಾಂತಾರ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿದೆ. ಕನ್ನಡದಲ್ಲಿ ಮಾತ್ರವಲ್ಲ, ಹಲವು ಭಾಷೆಗಳಲ್ಲೂ ಈ ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದಾರೆ ಹೊಂಬಾಳೆ ಫಿಲ್ಮ್ಸ್.
ನಾಳೆಯಿಂದ ಕಾಂತಾರ (Kantara) ಸಿನಿಮಾ ಬಾಲಿವುಡ್ (Bollywood) ನಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಪ್ರಮೋಷನ್ಗಾಗಿ ಇಡೀ ತಂಡ ಮುಂಬೈನಲ್ಲಿ ಬೀಡು ಬಿಟ್ಟಿದೆ. ಇದೇ ಸಂದರ್ಭದಲ್ಲೇ ಕೇಂದ್ರ ಸಚಿವರನ್ನು ವಿಜಯ್ ಅವರು ಭೇಟಿ ಮಾಡಿ, ಭಾರತೀಯ ಸಿನಿಮಾ ರಂಗದ ಬಗ್ಗೆ ಮಾತನಾಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.