ಬೆಂಗಳೂರು: ಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದ್ದು, ಆಪ್ ನೋಂದಣಿ ಆಟೋ ಚಾಲಕರಿಗೆ ಈಗ ಸೀಝ್ ಆತಂಕ ಹೆಚ್ಚಾಗಿದೆ. ಈ ನಡುವೆ ಬಹುತೇಕ ಚಾಲಕರು ಆಪ್ ಬಳಕೆ ಮಾಡದಿರಲು ತೀರ್ಮಾನಿಸಿದ್ದು, ನಮಗೆ ಆಪ್ ಸಹವಾಸವೇ ಸಾಕಪ್ಪ ಅಂತಿದ್ದಾರೆ.
ಹೌದು, ಆಪ್ ಆಧಾರಿತ ಆಟೋ (Auto) ಸೇವೆಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಸರ್ಕಾರ ನಿಗದಿ ಮಾಡಿರುವ ಹಣಕ್ಕಿಂತ ಹೆಚ್ಚಿಗೆ ಹಣವನ್ನ ಗ್ರಾಹಕರಿಂದ ವಸೂಲಿ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ 3 ದಿನದಲ್ಲಿ ಈ ಬಗ್ಗೆ ಉತ್ತರ ಕೊಡುವಂತೆ ಸಾರಿಗೆ ಇಲಾಖೆ (Transport) ಆಯುಕ್ತರು ಕಂಪನಿಗಳಿಗೆ ಸೂಚನೆ ನೀಡಿದ್ರು. ಆದರೆ ಈ ಬಗ್ಗೆ ಕ್ಯಾರೆ ಎನ್ನದ ಕಂಪನಿಗಳು ಎಂದಿನಂತೆ ತಮ್ಮ ಹಳೇ ಛಾಳಿ ಮುಂದುವರೆಸಿದ್ದವು. ಈ ಕಾರಣಕ್ಕಾಗಿಯೇ ಸದ್ಯ ಮಂಗಳವಾರದಿಂದ ಆಪ್ ಬಂದ್ ಆಗುವ ಸಾಧ್ಯತೆಯಿದೆ. ಆಪ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಆಟೋಗಳಿಗೂ ಸೀಝ್ ಮಾಡುವ ಎಚ್ಚರಿಕೆ ನೀಡಿದೆ.
ಇನ್ನೂ ಸಾರಿಗೆ ಇಲಾಖೆ ಎಚ್ಚರಿಕೆ ಬೆನ್ನಲ್ಲೆ ಆಟೋ ಚಾಲಕರಿಗೂ ಆತಂಕ ಹೆಚ್ಚಾಗಿದೆ. ಸಾರಿಗೆ ಇಲಾಖೆ ವಾರ್ನಿಂಗ್ ಬೆನ್ನಲ್ಲೆ ಆಪ್ ಬಳಕೆ ಮಾಡದಿರಲು ಆಟೋ ಚಾಲಕರು ನಿರ್ಧಾರ ಮಾಡಿದ್ದು, ಓಲಾ, ಊಬರ್ ಆಪ್ (Ola Uber App) ಬಂದ್ ಮಾಡಿದ್ರೆ ಒಳ್ಳೆಯದಾಗಲಿದೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಿರುಪತಿಯಲ್ಲಿ ದರ್ಶನಕ್ಕೆ ಕಾಯಬೇಕು 50 ಗಂಟೆ
ಇನ್ನೂ ಕೆಲ ಚಾಲಕರು ಆಪ್ ಬಂದ್ ಆದ್ರೆ ಸಮಸ್ಯೆ ಆಗಲಿದೆ ಅನ್ನೋ ಅಭಿಪ್ರಾಯವನ್ನೂ ಕೂಡ ವ್ಯಕ್ತಪಡಿಸಿದ್ದಾರೆ. ಆಟೋದವರಿಗಿಂತ ಗ್ರಾಹಕರಿಗೆ ಹೆಚ್ಚು ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸಾರಿಗೆ ಇಲಾಖೆ ಎಲ್ಲರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಮಾಡಿದ್ರೆ ಸೂಕ್ತ ಅನ್ನೋದು ಕೆಲ ಚಾಲಕರ ಮಾತು..
ಒಟ್ಟಾರೆ ಸಾರಿಗೆ ಇಲಾಖೆಯೇನೋ ಆಪ್ಗಳನ್ನ ಬಂದ್ ಮಾಡುವ ಸೂಚನೆ ನೀಡಿದೆ. ಆದರೆ ಇದು ಎಷ್ಟರ ಮಟ್ಟಿಗೆ ಜಾರಿಗೆ ತರುತ್ತೆ. ಆದಾದ ಮೇಲೆ ಈ ಬಗ್ಗೆ ಫಾಲೋ ಆಪ್ ಹೇಗಿರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.