ಬೆಂಗಳೂರು: ಯಾವುದೇ ಧರ್ಮ, ಜಾತಿಯವರಿಗೆ ಸಿಎಂ ಸ್ಥಾನ ಮೀಸಲು ಅಲ್ಲ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಎಸ್.ಎಂ.ಕೃಷ್ಣ ಅವರ ನಂತರ ಒಕ್ಕಲಿಗ ಸಮುದಾಯದ ವ್ಯಕ್ತಿ ಉನ್ನತ ಸ್ಥಾನಕ್ಕೆ ಏರುವ ಅವಕಾಶವಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಈ ಅವಕಾಶ ತಪ್ಪಿಸಿಕೊಳ್ಳಬೇಡಿ ಎಂದು ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯದವರಲ್ಲಿ ಮನವಿ ಮಾಡುವ ಮೂಲಕ ತಾನೂ ಕೂಡ ಮುಂದಿನ ಸಿಎಂ ಅಭ್ಯರ್ಥಿ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮೋತ್ಸವಕ್ಕೆ ‘ಹರ್ ಘರ್ ತಿರಂಗಾ’ ಅಭಿಯಾನ – ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ಹಾರಲಿದೆ ತ್ರಿವರ್ಣ ಧ್ವಜ
ಈ ಕುರಿತಂತೆ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಶೋಕ್ ಅವರು, ಯಾವುದೇ ಧರ್ಮ, ಜಾತಿಯವರಿಗೆ ಸಿಎಂ ಸ್ಥಾನ ಮೀಸಲು ಇಲ್ಲ. ಪಾರ್ಟಿ, ಬೆಂಬಲ ಇದ್ದರೆ ಆಗುತ್ತದೆ. ಪ್ರಯತ್ನ ಮಾಡೋದು ತಪ್ಪಲ್ಲ. ಅದೃಷ್ಟ ಬಂದಾಗ ಆಗುತ್ತದೆ. ಅಲ್ಲಿಯವರೆಗೂ ಕಾಯಬೇಕು ಅಷ್ಟೇ ಎಂದಿದ್ದಾರೆ.
ನಂತರ ನಾನು ರಾಷ್ಟ್ರಪತಿ ಚುನಾವಣೆಗೆ ಮತ ಹಾಕಿದ್ದೀನಿ. ಎರಡು ದಿನಗಳಿಂದ ತರಬೇತಿ ನೀಡಿದ್ದಾರೆ. ಮತ ವ್ಯರ್ಥ ಆಗಬಾರದು. ಚಲಾಯಿಸುವ ಮತ ನಮ್ಮ ಮತ ಹೋಗಬೇಕು. ಮತದಾನ ಮಾಡುವುದು ಹೇಗೆ ಅಂತ ಹೇಳಿಕೊಟ್ಟಿದ್ದಾರೆ. ನಾವು ಗೌಪ್ಯ ಮತದಾನ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಮಿಳುನಾಡು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ಪ್ರಾಂಶುಪಾಲರು, ಶಿಕ್ಷಕರು ಸೇರಿ ಐವರು ಅರೆಸ್ಟ್
ಹಳೆ ಮೈಸೂರು ಭಾಗದಲ್ಲಿ ಅನ್ಯಪಕ್ಷದವರು ಬಿಜೆಪಿ ಸೇರುವ ವಿಚಾರವಾಗಿ ಮಾತನಾಡಿದ ಅವರು, ಅನ್ಯ ಪಕ್ಷದವರನ್ನು ಬಿಜೆಪಿ ಸೇರ್ಪಡೆ ಬಗ್ಗೆ ಈಗಾಗಲೇ ಆಕ್ಷನ್ ಪ್ಲಾನ್ ರೆಡಿಯಾಗಿದೆ. ಅದರಲ್ಲಿ ಶಾಸಕರೇ ಹೆಚ್ಚು ಇದ್ದಾರೆ. ಈಗ ಶಾಸಕರನ್ನು ಸೇರಿಸಿಕೊಳ್ಳುವುಕ್ಕೆ ಆಗುವುದಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಈ ಬಾರಿ ಖಂಡಿತವಾಗಿಯೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಒಳ್ಳೆಯ ಫೈಟ್ ಅಂತೂ ಇದೆ ಎಂದು ಹೇಳಿದ್ದಾರೆ.
ಬೆಳೆ ಹಾನಿ ಪ್ರದೇಶ, ಮಳೆ ಹಾನಿ ಪ್ರದೇಶಗಳಿಗೆ ಎಲ್ಲಾ ಮಂತ್ರಿಗಳು ಭೇಟಿ ನೀಡಿದ್ದಾರೆ. ಸಿಎಂ ಕೂಡ ಹೆಚ್ಚುವರಿ ಹಣ ಬಿಡುಗಡೆ ಮಾಡಿದ್ದಾರೆ. ಈ ಬಾರಿ ರೈತರಿಗೆ ನಷ್ಟವಾದ ಬೆಳೆಹಾನಿ ಪರಿಹಾರ ಕೊಡಲಾಗುವುದು. ಡಬಲ್ ಬೆನಿಫಿಟ್ ಬರುವ ರೀತಿ ಪ್ಲಾನ್ ಆಗಿದೆ. ಕಂದಾಯ ಇಲಾಖೆ ಹೊಸ ಯೋಜನೆ ರೂಪಿಸಿದೆ. ಕಾಂಗ್ರೆಸ್ ಕಾಲದಲ್ಲಿ ಗಂಜಿ ಕೇಂದ್ರ ಅಂತ ಮಾಡಿದ್ದರು. ಈಗ ಅದರ ಬದಲು ಕಾಳಜಿ ಕೇಂದ್ರ ಅಂತ ಮಾಡಿದ್ದೇವೆ. ಕಾಂಗ್ರೆಸ್ನವರು ಬರೀ ಅನ್ನ ಸಾಂಬಾರ್ ಮಾತ್ರ ಕೊಡುತ್ತಿದ್ದರು. ಈಗ ಚಪಾತಿ, ಮೊಟ್ಟೆ ಸೇರಿದಂತೆ ಪೌಷ್ಟಿಕ ಆರೋಗ್ಯ ಊಟ ನೀಡುತ್ತಿದ್ದೇವೆ. ಕಾಳಜಿ ಕೇಂದ್ರದಿಂದ ಅವರು ಮನೆಗೆ ಹೋದಾಗ ಏನು ಇರಲ್ಲ. ಹಾಗಾಗಿ ಅವರಿಗೆ ಹತ್ತುಬದಿನಕ್ಕೆ ಆಗುವ ಆಹಾರ ಕಿಟ್ ಕೊಡುತ್ತಿದ್ದೇವೆ. ಕಾಳಜಿ ಕೇಂದ್ರಕ್ಕೆ ಬರಲು ಹಿಂಜರಿಯುವವರು ನೆಂಟರ ಮೆನೆಗೆ ಹೋಗುತ್ತಾರೆ. ಅವರಿಗೂ ಕಿಟ್ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಮಳೆ ಪರಿಹಾರ : ಮಳೆ ನಿಂತಿಲ್ಲ. ಮಳೆ ಸಂಪೂರ್ಣ ನಿಂತ ಬಳಿಕ ಸಂಪೂರ್ಣ ಸಮೀಕ್ಷೆ ಮಾಡಿ ವರದಿ ನೀಡುತ್ತೇವೆ. ಮೊದಲು ರಾಜ್ಯ ಸರ್ಕಾರ ಪರಿಹಾರ ಹಣ ಕೊಟ್ಟು ಬಿಡುತ್ತದೆ. ಬಳಿಕ ಕೇಂದ್ರದಿಂದ ಬರುವ ಹಣ ನಾವು ಬಳಕೆ ಮಾಡಿಕೊಳ್ಳುತ್ತೇವೆ. ಅಂದಾಜು ಎಷ್ಟು ನಷ್ಟ ಆಗಿದೆ ಎನ್ನುವುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಮಳೆ ಎಲ್ಲ ನಿಂತ ಮೇಲೆ ಸಮೀಕ್ಷೆ ಮಾಡಿ, ನಂತರ ಅಂತಿಮ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಪರಿಹಾರಕ್ಕಾಗಿ ಕಳುಹಿಸುತ್ತೇವೆ ಎಂದಿದ್ದಾರೆ.