ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಿಜಬ್ ವಿವಾದದ ಹಿಂದೆ ಬಿಜೆಪಿ ಹಾಗೂ ಎಸ್ಡಿಪಿಐ ಸಂಘಟನೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಿಜಬ್ ವಿವಾದ ಕೋರ್ಟ್ ನಲ್ಲಿ ಇದೆ. ಹಿಂದೆ ಹೇಗಿತ್ತೋ ಹಾಗೆಯೇ ಯಥಾವತ್ತಾಗಿ ಮುಂದುವರಿಯಬೇಕು ಅನ್ನೋದು ನಮ್ಮ ನಿಲುವು. ಶಿಕ್ಷಣ ಎಲ್ಲರ ಹಕ್ಕು ಅದಕ್ಕೆ ಅಡ್ಡಿಪಡಿಸುವುದು ತಪ್ಪು. ಶಿಕ್ಷಣವೇ ಮೂಲ ಧರ್ಮ ಎಂದರು.
ಅವರು ಅದು ಹಾಕಿದರೆ, ನಾವು ಇದು ಹಾಕ್ತೀವಿ ಅಂತ ಬಿಜೆಪಿಯವರು ಸೃಷ್ಟಿ ಮಾಡಿದರು. ಫೆಬ್ರವರಿ 5 ರಂದು ಆದೇಶ ಹೊರಡಿಸಿ ಸಮಸ್ಯೆಗಳನ್ನು ಶುರು ಮಾಡಿದರು. ರೈಟು ಟು ಎಜ್ಯುಕೇಶನ್, ರೈಟ್ ಟು ಕಲ್ಚರ್ ಎಲ್ಲದಕ್ಕೂ ಸಂವಿಧಾನದಲ್ಲಿ ಹೇಳಲಾಗಿದೆ. ಅದನ್ನ ಗೌರವಿಸಬೇಕು. ಕೋರ್ಟ್ ಆದೇಶವನ್ನೇ ಗೌರವಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್. ಅದನ್ನು ಉಳಿಸಲು ಹೋರಾಟ ಆರಂಭಿಸಿದ್ದೇವೆ. ಸಿಎಂ ರಾಜ್ಯಪಾಲರು ಈಶ್ವರಪ್ಪ ಅವರನ್ನು ವಜಾ ಮಾಡಬೇಕು ಎಂದು ಡಿಕೆಶಿ ಆಗ್ರಹಿಸಿದರು. ಇದನ್ನೂ ಓದಿ: ಕುಂಕುಮ, ಬಳೆ ಬಗ್ಗೆ ಮಾತಾಡಿದ್ರೆ ನಾಲಿಗೆ ಸೀಳ್ತೀವಿ ಹುಷಾರ್: ಪ್ರಮೋದ್ ಮುತಾಲಿಕ್
ಇದೇ ತಿಂಗಳು 27 ರಿಂದ ಮೇಕೆದಾಟು ಪಾದಯಾತ್ರೆ ಆರಂಭಿಸುತ್ತಿದ್ದೇವೆ. ಮಾರ್ಚ್ 3ರಂದು ಮುಕ್ತಾಯ ಆಗುತ್ತೆ, 7 ದಿನ ಇದ್ದ ಪಾದಯಾತ್ರೆಯಲ್ಲಿ 2 ದಿನ ಕಡಿತ ಮಾಡಿದ್ದೇವೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ನಾವು ಪಾದಯಾತ್ರೆ ನಡೆಸುತ್ತೇವೆ. ಮಹದಾಯಿಯಲ್ಲಿ ಗೋವಾ ಕಾಂಗ್ರೆಸ್ ಗೋವಾದವರ ನಿಲುವು ಏನು ಅನ್ನೋದು ನಮಗೆ ಮುಖ್ಯ ಅಲ್ಲ. ಅವರು ಏನು ಬೇಕಾದರು ಹೇಳಲಿ. ನಮ್ಮ ನಿಲುವು ನಮಗೆ. ನಮ್ಮ ನಿಲುವು ಕರ್ನಾಟಕ ರಾಜ್ಯದ ಪರವಾಗಿ ರಾಜ್ಯದ ಹಿತಕ್ಕಾಗಿ ಎಂದು ಹೇಳಿದರು.