ನವದೆಹಲಿ: ನನಗೆ ಶಾಸಕ ಪ್ರೀತಂಗೌಡ ಬಗೆಗಿನ ಪ್ರಶ್ನೆಗಳನ್ನು ಕೇಳಬೇಡಿ, ನನ್ನನ್ನು ಅಷ್ಟು ಕೆಳ ಮಟ್ಟಕ್ಕೆ ಇಳಿಸಬೇಡಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳುವ ಮೂಲಕ ಶಾಸಕರ ಪ್ರಶ್ನೆಗೆ ಅಸಮಾಧಾನ ಹೊರ ಹಾಕಿದ್ದಾರೆ.
ಸಂಸತ್ ಕಲಾಪದ ವಿಚಾರಗಳ ಬಗ್ಗೆ ಇಂದು ಅವರು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಹೆಚ್.ಡಿ ದೇವೇಗೌಡರ ಭೇಟಿ ಸಂಬಂಧ ಪ್ರೀತಂಗೌಡ ವ್ಯಕ್ತಪಡಿಸಿದ ಅಸಮಾಧಾನ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೀವು ಈ ಬಗ್ಗೆ ನನ್ನ ಮತ್ತೆ ಮತ್ತೆ ಪ್ರಶ್ನೆ ಮಾಡಬೇಡಿ, ಈ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿಡಿಮಿಡಿಗೊಂಡರು.
ಬಿಜೆಪಿ ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮಾತನಾಡಿದ ಅವರು, ನಾನು ಆ ಬಗ್ಗೆ ಚರ್ಚೆ ಮಾಡಲ್ಲ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬೊಮ್ಮಾಯಿ ನಿರ್ಧಾರ ಮಾಡುತ್ತಾರೆ. ಗೊಂದಲಗಳನ್ನು ನಿಭಾಯಿಸಲು ಬೊಮ್ಮಾಯಿ ಸಮರ್ಥರಿದ್ದಾರೆ ಎಂದರು. ಇದನ್ನೂ ಓದಿ: ಒಂದು ದಿನವೂ ಗೈರಾಗಲಿಲ್ಲ, ಆದ್ರೂ ರಾಜ್ಯಸಭೆಯಲ್ಲಿ ಮಾತಾಡಲು ಅವಕಾಶ ಸಿಗಲಿಲ್ಲ: ಹೆಚ್ಡಿಡಿ ಬೇಸರ
ಸಿಎಂ ಬೊಮ್ಮಾಯಿ ಅವರು ನನ್ನ ಮನೆಗೆ ಬಂದಿದ್ದರು. ನನ್ನಿಂದ ಸರ್ಕಾರಕ್ಕೆ ಏನೂ ತೊಂದರೆ ಆಗಲ್ಲ ಎಂದಿದ್ದೇನೆ ಅಷ್ಟೇ. ನೆಲ-ಜಲ-ಭಾಷೆ ವಿಚಾರವಾಗಿ ಸಹಕಾರ ನೀಡುತ್ತೇವೆ. ಜೊತೆಗೆ ರಾಜ್ಯದ ಜನತೆ ಅಭಿವೃದ್ಧಿ ವಿಚಾರವಾಗಿ ನಮ್ಮ ಪಕ್ಷ ಎಲ್ಲ ಸಹಕಾರಕ್ಕೂ ಸಿದ್ದವಿದೆ ಎಂದು ಹೇಳಿರುವುದಾಗಿ ಅವರು ತಿಳಿಸಿದರು.