ನವದೆಹಲಿ: ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ನ್ಯಾ ಉದಯ್ ಲಲಿತ್ ನೇತೃತ್ವದ ದ್ವಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿ ಸಿಬಿಐ ಆಕ್ಷೇಪಣೆಯ ನಡುವೆಯೂ ಜಾಮೀನು ನೀಡಿ ಆದೇಶ ಪ್ರಕಟಿಸಿದೆ.
ಧಾರವಾಡಕ್ಕೆ ಭೇಟಿ ನೀಡುವಂತಿಲ್ಲ. ಸಿಬಿಐ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ಕೋರ್ಟ್ ವಿನಯ್ ಕುಲಕರ್ಣಿಗೆ ಷರತ್ತು ವಿಧಿಸಿದೆ. ವಿನಯ್ ಕುಲಕರ್ಣಿ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಸಿಬಿಐ ಪರ ವಕೀಲ ಎಎಸ್.ಜಿ. ಎಸ್.ವಿ. ರಾಜು ವಾದ ಮಂಡನೆ ಮಾಡಿದರು. ಇದನ್ನೂ ಓದಿ: ಹಿಂಡಲಗಾ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ರಾತ್ರಿ ಕಳೆದ ವಿನಯ್ ಕುಲಕರ್ಣಿ
ಸಿಬಿಐ ಪರ ವಾದ ಏನಿತ್ತು?
ಎ1 ಆರೋಪಿಗಳಿಂದ ಎ15 ರವರೆಗಿನ ಆರೋಪಿಗಳಿಗೆ ಆರು ಲಕ್ಷ ರೂಪಾಯಿ ಹಣ ಪಾವತಿಯಾಗಿದೆ. ಕೇಸ್ ತನಿಖಾಧಿಕಾರಿಗೂ ಎರಡು ಲಕ್ಷ ರೂಪಾಯಿ ಹಣ ಪಾವತಿಯಾಗಿದೆ. ವಿನಯ್ ಕುಲಕರ್ಣಿ ಮನವಿ ಮೇರೆಗೆ ಹಾರ್ನ್ ಬಿಲ್ ರೆಸಾರ್ಟ್ ನಲ್ಲಿ ಸಾಕ್ಷಿಗಳಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.
ವಿನಯ್ ಕುಲಕರ್ಣಿಗೆ ಯೋಗೀಶ್ ಗೌಡ ಜೊತೆಗೆ ವೈಷಮ್ಯ ಇತ್ತು. ಭೂ ವಿವಾದದಿಂದ ಕೊಲೆಯಾಗಿದೆ ಎಂದು ಬಿಂಬಿಸುವ ಯತ್ನ ಮಾಡಿದ್ದರು. ಸಿಬಿಐ ತನಿಖೆ ನಡೆಸಿದ ಬಳಿಕ ದೊಡ್ಡ ಷಡ್ಯಂತ್ರ ಬೆಳಕಿಗೆ ಬಂದಿದೆ. ವಿನಯ್ ಕುಲಕರ್ಣಿ ಕೊನೆಯಲ್ಲಿ ಪ್ರಮುಖ ಪಾತ್ರವಾಗಿದ್ದು, ಸಾಕ್ಷ್ಯವನ್ನು ತಿರುಚಲಾಗಿದೆ. ಪೊಲೀಸ್ ತನಿಖೆಯಲ್ಲಿ ಕೊಲೆ, ಸಣ್ಣ ಷಡ್ಯಂತ್ರ ಮಾತ್ರ ಪ್ರಸ್ತಾಪವಾಗಿದೆ.
ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಅವರನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ವಿನಯ್ ಕುಲಕರ್ಣಿ ಅವರನ್ನು ಸಿಬಿಐ 2020ರ ನವೆಂಬರ್ 05 ರಂದು ಬಂಧಿಸಿತ್ತು.