ಬೆಂಗಳೂರು: ಮಹಾರಾಷ್ಟ್ರ ಮತ್ತು ಕೇರಳದ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರದಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ (Karnataka Weekend Curfew) ಜಾರಿಯಾಗಲಿದೆ.
ರಾಜ್ಯ ಸರ್ಕಾರ ಇಂದು ಸಂಜೆ ಮಾರ್ಗಸೂಚಿಯನ್ನು ಪ್ರಕಟಿಸಿದೆ. ರಾಜ್ಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವೆರೆಗೆ ನೈಟ್ ಕರ್ಫ್ಯೂ ಇರಲಿದೆ. ಇಂದಿನಿಂದ ಆಗಸ್ಟ್ 16ರವರೆಗೆ ಈ ಮಾರ್ಗಸೂಚಿ ಜಾರಿಯಲ್ಲಿ ಇರಲಿದೆ.
ದೇವಾಲಯ, ಮಸೀದಿ, ಚರ್ಚ್, ಗುರುದ್ವಾರದಲ್ಲಿ ಕೋವಿಡ್ 19 ನಿಯಮಗಳನ್ನು ಪಾಲನೆ ಮಾಡಿಕೊಂಡು ನಿತ್ಯದ ಪ್ರಾರ್ಥನೆಗೆ ಅನುಮತಿ ನೀಡಲಾಗಿದೆ. ರಾಜ್ಯಾದ್ಯಂತ ಜಾತ್ರೆ, ದೇವಾಲಯದ ಉತ್ಸವ, ಮೆರವಣಿಗೆ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಜನ ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.
ಮದುವೆಗೆ ಗರಿಷ್ಠ 100 ಮಂದಿ ಅಂತ್ಯಸಂಸ್ಕಾರಕ್ಕೆ ಗರಿಷ್ಠ 20 ಮಂದಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
8 ಜಿಲ್ಲೆಗಳಲ್ಲಿ ಹೇಗೆ?
– ಉದ್ಯೋಗಕ್ಕೆ ತೆರಳುವ ಉದ್ಯೋಗಿಗಳು ಐಡಿ ಕಾರ್ಡ್ ಧರಿಸುವುದು ಕಡ್ಡಾಯ.
– ಆಹಾರ, ತರಕಾರಿ, ದಿನಸಿ, ಮಾಂಸ, ಹಾಲು, ಪ್ರಾಣಿಗಳ ಆಹಾರ ನೀಡುವ ಅಂಗಡಿಗಳು ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅನುಮತಿ.
– ಮದ್ಯದಂಗಡಿ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶವಿದ್ದರೂ ಪಾರ್ಸೆಲ್ಗೆ ಮಾತ್ರ ಅನುಮತಿ
– ಆನ್ಲೈನ್ ಫುಡ್ ಡೆಲಿವರಿಗೆ ಯಾವುದೇ ನಿರ್ಬಂಧ ಇಲ್ಲ ಇದನ್ನೂ ಓದಿ: ನಿಧಾನವಾಗಿ ಏರುತ್ತಿದೆ ಕೊರೊನಾ ಪಾಸಿಟಿವಿಟಿ ರೇಟ್, ಇಂದು ಶೇ.1.11- 1,805 ಹೊಸ ಕೇಸ್, 36 ಸಾವು
– ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅನುಮತಿ
– ರೈಲ್ವೇ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಸಾರ್ವಜನಿಕ ಸಾರಿಗೆ, ಖಾಸಗಿ ವಾಹನ, ಟ್ಯಾಕ್ಸಿಗಳ ಮೂಲಕ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ಪ್ರಯಾಣದ ದಾಖಲೆ ತೋರಿಸುವುದು ಕಡ್ಡಾಯ.
– ಮದುವೆಗೆ ಗರಿಷ್ಠ 100 ಮಂದಿ ಅಂತ್ಯಸಂಸ್ಕಾರಕ್ಕೆ ಗರಿಷ್ಠ 20 ಮಂದಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.