ಕೋಲಾರ: ಮಹಾಮಾರಿ ಕೊರೊನಾ 2ನೇ ಅಲೆ ತಡೆಗಟ್ಟುವ ಹಿನ್ನೆಲೆ ರಾಜ್ಯ ಸರ್ಕಾರ ಹೊರಡಿಸಿರುವ ಜನತಾ ಕರ್ಫ್ಯೂಗೆ ಕೋಲಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ 10 ಗಂಟೆ ಬಳಿಕ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ ಆಟೋ ಮತ್ತು ಬೈಕ್ಗಳನ್ನು ವಶಕ್ಕೆ ಪಡೆಯುವ ಮೂಲಕ ಸವಾರರಿಗೆ ಪೊಲೀಸರು ಚುರುಕು ಮುಟ್ಟಿಸಿದ್ದಾರೆ.
11 ಗಂಟೆಯಾದರೂ ಕೂಡ ರಸ್ತೆಯಲ್ಲಿ ಬೇಕಾ ಬಿಟ್ಟಿ ಓಡಾಟ ಮಾಡಿದ 20 ಕ್ಕೂ ಹೆಚ್ಚು ಬೈಕ್, ಆಟೋ ಮತ್ತು ಕಾರುಗಳನ್ನು ವಶಕ್ಕೆ ಪಡೆದಿರುವ ಕೋಲಾರ ನಗರದ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಪ್ರತಿ ವಾಹನವನ್ನು ತಪಾಸಣೆ ಮಾಡಿ ಕಳುಹಿಸುತ್ತಿದ್ದ ಪೊಲೀಸರು ಅನಗತ್ಯವಾಗಿ ಓಡಾಟ ಮಾಡುವ ವಾಹನ ಸವಾರರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಇದು ಮಾತ್ರವಲ್ಲದೆ ಕೋಲಾರ ಪೊಲೀಸರಿಂದ ಕಟ್ಟು ನಿಟ್ಟಿನ ಜನತಾ ಕರ್ಫ್ಯೂ ಜಾರಿ ಮಾಡಲಾಗುತ್ತಿದ್ದು, ಈ ಮಧ್ಯೆ ಕೋಲಾರದ ಕೆಜಿಎಫ್ನಲ್ಲಿ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಕೆಜಿಎಫ್ ಪೊಲೀಸರು, ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ 10 ಕ್ಕೂ ಹೆಚ್ಚು ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ. 11 ಗಂಟೆಯಾದ್ರು ಓಡಾಟ, ಪ್ರಯಾಣಿಕರನ್ನು ಕರೆ ತರುತ್ತಿದ್ದ ಆಟೋಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ದಂಡ ಕಟ್ಟಿ ತೆರಳುವಂತೆ ಅಟೋ ಚಾಲಕರಿಗೆ ಸೂಚಿಸಿದ್ದಾರೆ.