ಚೆನ್ನೈ ಅದ್ಭುತ ಆಟ, ಆರ್‌ಸಿಬಿಯ ಕೆಟ್ಟ ದಿನಗಳಲ್ಲಿ ಇದೂ ಒಂದು: ಕಿಚ್ಚ

2 Min Read

ಬೆಂಗಳೂರು: ಐಪಿಎಲ್‍ನ ಹೈ ವೋಲ್ಟೇಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ಜಡೇಜಾ ಮ್ಯಾಜಿಕ್‍ನಿಂದಾಗಿ 69 ರನ್ ಗಳಿಂದ ಚೆನ್ನೈ ಭರ್ಜರಿ ಜಯ ಸಾಧಿಸಿದೆ. ಈ ಬಗ್ಗೆ ನಟ ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ವೆಲ್ ಪ್ಲೇಯ್ಡ್ ಚೆನ್ನೈ ಸೂಪರ್ ಕಿಂಗ್ಸ್, ಇಲ್ಲಿಂದ ಇನ್ನೂ ಹೆಚ್ಚು ಆಸಕ್ತಿದಾಕವಾಗಿದೆ. ಅಲ್ಲದೆ ಆರ್ ಸಿಬಿಯ ಕೆಟ್ಟ ದಿನಗಳಲ್ಲಿ ಇದೂ ಒಂದು. ನಮ್ಮ ಹೃದಯ ಹಾಗೂ ಶುಭಾಶಯ ಯಾವತ್ತೂ ಆರ್ ಸಿಬಿ ಜೊತೆಗೆ ಇರುತ್ತದೆ. ಮುಂದಿನ ಪಂದ್ಯಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: 1 ಓವರ್‌ನಲ್ಲಿ 5 ಸಿಕ್ಸ್, 1 ಮೇಡನ್ 3 ವಿಕೆಟ್ – ಜಡೇಜಾ ಜಾದೂ, ಚೆನ್ನೈಗೆ 69 ರನ್‍ಗಳ ಭರ್ಜರಿ ಜಯ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‍ರೌಂಡರ್ ರವೀಂದ್ರ ಜಡೇಜಾ ಮೋಡಿ ಕುರಿತು ಸಹ ಮೆಚ್ಚುಗೆ ವ್ಯಕ್ತಪಡಿಸಿರುವ ಕಿಚ್ಚ, ತುಂಬಾ ಅದ್ಭುತವಾಗಿ ಆಡಿದ್ದೀರಿ, ಇಂದು ನಿಜವಾಗಿಯೂ ನೀವು ಸೂಪರ್ ಮ್ಯಾನ್ ರೀತಿ ಕಂಡಿರಿ, ಸರ್ವಶಕ್ತ ಎಂದು ಹಾಡಿ ಹೊಗಳಿದ್ದಾರೆ.

ಇಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ 69 ರನ್‍ಗಳಿಂದ ಚೆನ್ನೈ ಗೆದ್ದು ಬೀಗಿದೆ. ರವೀಂದ್ರ ಜಡೇಜಾ ಅವರ ಆಲ್‍ರೌಂಡರ್ ಆಟದಿಂದ ಈ ಭರ್ಜರಿ ಗೆಲುವು ಸಾಧ್ಯವಾಗಿದ್ದು, ಗೆಲ್ಲಲು 192 ರನ್‍ಗಳ ಕಠಿಣ ಗುರಿಯನ್ನು ಪಡೆದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು. ಈ ಮೂಲಕ ಸತತ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಬೆಂಗಳೂರು, ಈಗ ಎರಡನೇ ಸ್ಥಾನಕ್ಕೆ ಜಾರಿದೆ. ಚೆನ್ನೈ ಮೊದಲ ಸ್ಥಾನಕ್ಕೆ ಏರಿದೆ.

ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಜಡೇಜಾ ಇಂದು ವಾಷಿಂಗ್ಟನ್ ಸುಂದರ್ ಅವರನ್ನು ಕ್ಯಾಚ್ ಔಟ್ ಮಾಡಿದ್ದರೆ ಮ್ಯಾಕ್ಸ್ ವೆಲ್ ಮತ್ತು ಎಬಿಡಿ ವಿಲಿಯರ್ಸ್ ಅವರನ್ನು ಬೌಲ್ಡ್ ಮಾಡಿದರು. ಅಷ್ಟೇ ಅಲ್ಲದೇ ಡೇನಿಯಲ್ ಕ್ರಿಸ್ಟಿಯನ್ ಅವರನ್ನು ರನೌಟ್ ಮಾಡಿದರು. ಅಂತಿಮವಾಗಿ ಜಡೇಜಾ 4 ಓವರ್‍ಗಳ ಕೋಟಾದಲ್ಲಿ 1 ಮೇಡನ್ ಮಾಡಿ 13 ರನ್ ನೀಡಿ 4 ವಿಕೆಟ್ ಕಿತ್ತರು.

Share This Article
Leave a Comment

Leave a Reply

Your email address will not be published. Required fields are marked *