ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಕೈಮೀರುತ್ತಿದೆ. ಈ ನಡುವೆ ಕಿರುತೆರೆ ಕಲಾವಿದ ಗಟ್ಟಿಮೇಳದ ಪವನ್ ಕುಮಾರ್ ತಮ್ಮ ಕುಟುಂಬದ ಇಬ್ಬರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಕೊರೊನಾದಿಂದಾಗಿ ಮರಣ ಹೊಂದಿದ್ದಾರೆ. ರಾಜ್ಯ ಸರ್ಕಾರ ಜನರ ಜೀವಕ್ಕೆ ಬೆಲೆ ಕೊಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪವನ್ ತಮ್ಮ ಕುಟುಂಬದವರನ್ನು ಕಳೆದುಕೊಂಡ ದುಖಃದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡುವ ಮೂಲಕ ಕೊರೊನಾ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದಾರೆ. ಪವನ್ ಕುಟುಂಬದಲ್ಲಿ ಇಬ್ಬರು ಕೊರೊನಾದಿಂದಾಗಿ ಬೆಡ್ ಸಿಗದೇ ಬಲಿಯಾಗಿದ್ದರು.
ಇದರಿಂದ ನೊಂದ ಪವನ್ ಅವರು ಸರ್ಕಾರದ ಅವ್ಯವಸ್ಥೆಗೆ ನಾನು ಕುಟುಂಬದವರನ್ನು ಕಳೆದುಕೊಂಡೆ. ನನ್ನ ಕಣ್ಣ ಎದುರಲ್ಲೇ ಭಾವ ಮತ್ತು ಅವರ ತಂದೆಯನ್ನು ಕೊರೊನ ಬಲಿ ಪಡೆದಿದೆ. ಕೊರೊನ ಎರಡನೇ ಅಲೆ ತುಂಬಾ ಭಯಾನಕವಾಗಿದೆ. ಸರ್ಕಾರ ಜನರಿಗೆ ಹೇಳುತ್ತಿರುವುದು ಬರಿ ಸುಳ್ಳು. ರಾಜಕಾರಣಿಗಳು ಹೇಳುತ್ತಿರುವುದು ಸಾವಿನ ಸಂಖ್ಯೆ ಕೂಡ ಸುಳ್ಳು ಎಂದು ಸರ್ಕಾರದ ವಿರುದ್ಧ ವಾಗ್ದಾಲಿ ನಡೆಸಿದ್ದಾರೆ.
ಎರಡು ದಿನಗಳ ಅಂತರದಲ್ಲಿ ನನ್ನ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡ ನನಗೆ ಕೊರೊನಾದ ಬಗ್ಗೆ ನಿಜ ಅರಿವಾಗಿದೆ. ಸರ್ಕಾರ ಜನರ ಜೀವಕ್ಕೆ ಬೆಲೆ ಕೊಡುತ್ತಿಲ್ಲ. ದಯವಿಟ್ಟು ಸಾರ್ವಜನಿಕರು ಮನೆಯಿಂದ ಹೊರ ಬರಬೇಡಿ. ಸರ್ಕಾರಕ್ಕೆ ನಮಗೆ ಬೇಕಾದ ಆಕ್ಸಿಜನ್ ಕೋಡುವುದಕ್ಕೆ ಆಗುತ್ತಿಲ್ಲ. ಒಂದು ಹೆಣ ಸುಡಲು ಸ್ಮಶಾನದಲ್ಲಿ 5 ರಿಂದ 6 ಗಂಟೆ ಕಾಯುತ್ತಿರುವುದನ್ನು ನೋಡಿದರೆ ಜನರ ಸಾವಿನ ಸಂಖ್ಯೆ ಎಷ್ಟಿರಬಹುದೆಂದು ನೀವೇ ಯೋಚಿಸಿ. ಸಾರ್ವಜನಿಕರು ದಯವಿಟ್ಟು ಎಚ್ಚರ ವಹಿಸಿಕೊಂಡು ನಿಮ್ಮ ಜೀವ ನೀವೇ ಉಳಿಸಿಕೊಳ್ಳಬೇಕು ಎಂದು ಮನವಿಮಾಡಿಕೊಂಡಿದ್ದಾರೆ.