– ಕೊರೊನಾ ನಿಯಮ ಅವರು ಫಾಲೋ ಮಾಡಿದ್ರೆ, ನಾವು ಫಾಲೋ ಮಾಡುತ್ತಿದ್ದೇವು
ಬೆಂಗಳೂರು: ಪ್ರಚಾರದ ವೇಳೆ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದು, ಮೂರು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಬಿಜೆಪಿ ಪರವಾಗಿ ಜನಾಭಿಪ್ರಾಯ ಇಲ್ಲ, ಜನ ವಿರೋಧಿüಗಳಾಗಿದ್ದಾರೆ. ದುಡ್ಡು ಕೊಟ್ಟು ಮತ ಕೊಂಡುಕೊಳ್ಳಲು ಮುಂದಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರನ್ನು ಸರ್ಕಾರ ಕರೆದು ಮಾತನಾಡಬೇಕು, ಪ್ರತಿಷ್ಠೆ ತೋರಿಸಬಾರದು. ಸರ್ಕಾರ ನಡೆಸೋರು ಕಾರ್ಮಿಕರು, ನೌಕರರು ಚಳವಳಿ ಮಾಡಿದಾಗ ಕಾರಣ ಕೇಳಿ ಪರಿಹಾರ ಮಾಡ್ಬೇಕು ಹಠಕ್ಕೆ ಬೀಳಬಾರದು. ಅವರ ಜೊತೆ ಕೂತು ಚರ್ಚಿಸಿಬೇಕು. ಕೆಲವು ಸಾಧಕಬಾಧಕಗಳನ್ನ ಚರ್ಚಿಸಿ ಮನವೊಲಿಸಬೇಕು. ಅದರ ಬದಲು ಹೆದರಿಸಿ, ಬೆದರಿಸಿ ಚಳವಳಿ ಹತ್ತಿಕ್ಕಬಾರದು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಕೊರೊನಾ ಸರ್ವಪಕ್ಷ ಸಭೆ ವಿಚಾರ ನಂಗೆ ಇನ್ನೂ ನೋಟಿಸ್ ಬಂದಿಲ್ಲ. ನೋಟಿಸ್ ಬಂದ್ಮೇಲೆ ಯೋಚನೆ ಮಾಡುತ್ತೇನೆ. ಇದು ಸರ್ಕಾರದ ಫೆಲ್ಯೂರ್ ಆಗಿದೆ. ಹೊರಗಡೆಯಿದ ಬಂದವರನ್ನ ಸರಿಯಾಗಿ ಟೆಸ್ಟ್ ಮಾಡೋದನ್ನ ನಿಲ್ಲಿಸಬಿಟ್ಟರು. ಜಾತ್ರೆ, ಸಮಾರಂಭಗಳು ಸರಿಯಾಗಿ ನಿಯಂತ್ರಣ ಮಾಡಿಲ್ಲ. ಚುನಾವಣಾ ಪ್ರಚಾರ ಮಾಡಿದ್ರು, ಅದಕ್ಕೆ ನಿಯಂತ್ರಣ ಹಾಕ್ಬೇಕಿತ್ತು. ಅವರು ಫಾಲೋ ಮಾಡಿದ್ರೆ, ನಾವು ಫಾಲೋ ಮಾಡುತ್ತಿದ್ದೇವು ಎಂದು ಹೇಳಿದ್ದಾರೆ.
ಕೊರೊನಾ ಹೆಚ್ಚಳಕ್ಕೆ ಸರ್ಕಾರವೇ ಹೊಣೆಯಾಗಿದೆ. ಬೆಡ್ಗಳು, ಐಸಿಯು ಕೊರತೆ ಆಗಬಾರದು. ಲಾಕ್ಡೌನ್ ಬಗ್ಗೆ ಸರ್ವ ಪಕ್ಷ ಸಭೆಯಲ್ಲಿ ಏನ್ ಹೇಳ್ಬೇಕೋ ಅದನ್ನ ಹೇಳುತ್ತೇನೆ ಎಂದಿದ್ದಾರೆ.