ಬಳ್ಳಾರಿ: ಗಣಿ ನಾಡಿನಲ್ಲಿ ಬೇಸಿಗೆ ಆರಂಭದಲ್ಲಿಯೇ ನೀರಿಗಾಗಿ ಪ್ರಾಣಿಗಳ ಆಹಾಕಾರ ಆರಂಭವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅರಣ್ಯ ಪ್ರದೇಶದಲ್ಲಿ ಚಿರತೆ ನೀರಿಗಾಗಿ ಪರದಾಡಿರುವ ವೀಡಿಯೋ ಇದೀಗ ವೈರಲ್ ಆಗಿದೆ.
ಜಿಲ್ಲೆಯ ಸಂಡೂರಿನ ಅರಣ್ಯ ಪ್ರದೇಶದಲ್ಲಿ ನೀರಿಗಾಗಿ ಚಿರತೆಯ ಪರದಾಟ ನಡೆಸಿದ್ದು, ವೀಡಿಯೋ ಈಗ ವೈರಲ್ ಆಗಿದೆ. ಸಂಡೂರಿನ ಗಣಿ ಪ್ರದೇಶಗಳಲ್ಲಿ ಗಣಿ ಲಾರಿಗಳು ಓಡಾಡುವ ರಸ್ತೆ ಮೇಲೆ ಚಿರತೆ ಬಂದು ನೀರು ಕುಡಿದಿದೆ.
ಸಂಡೂರು ಸುತ್ತಮುತ್ತಲಿನ ಗ್ರಾಮದಲ್ಲಿ ಗಣಿ ಲಾರಿಗಳ ಓಡಾಟ ಹೆಚ್ಚಾಗಿರುತ್ತೆ. ಹೀಗಾಗಿ ಗಣಿ ಲಾರಿಗಳು ಓಡಾಡುವ ರಸ್ತೆಯಲ್ಲಿ ದೂಳು ಏಳಬಾರದು ಎನ್ನುವ ಕಾರಣಕ್ಕೆ ರಸ್ತೆಯ ಮೇಲೆ ನೀರು ಹಾಕಲಾಗುತ್ತದೆ. ನೀರು ಅರಸಿಕೊಂಡು ಬಂದ ಚಿರತೆ ರಸ್ತೆಯಲ್ಲಿ ಹಾಕಿದ ಇದೇ ನೀರನ್ನು ಕುಡಿದಿದೆ. ಈ ದೃಶ್ಯವನ್ನು ರಸ್ತೆಗೆ ನೀರು ಹಾಕುತ್ತಿದ್ದ ಲಾರಿಯ ಕ್ಲೀನರ್ ಸೆರೆಹಿಡಿದಿದ್ದಾರೆ. ಚಿರತೆಯನ್ನು ಕಂಡ ಲಾರಿ ಚಾಲಕ ತಕ್ಷಣ ಬ್ರೆಕ್ ಹಾಕಿ ಲಾರಿ ನಿಲ್ಲಿಸಿದ್ದಾನೆ. ಕ್ಷಣಾರ್ಧದಲ್ಲಿ ನೀರು ಕೂಡಿದು ಚಿರತೆ ಮತ್ತೆ ಕಾಡಿನಲ್ಲಿ ಮರೆಯಾಗಿದೆ.