ಹಾಸನ: ಕಾಡಾನೆ ತುಳಿದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಅರಕಲಗೂಡು ತಾಲೂಕಿನ ಹಾಸನ-ಕೊಡಗು ಗಡಿ ಭಾಗದ ಬಾಣಾವರ ಗೇಟ್ ನ ಬೆಟ್ಟಗಳಲೆ ಬಳಿ ತಡರಾತ್ರಿ ನಡೆದಿದೆ.
ಅರಕಲಗೂಡು ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದ ರವಿ (35) ಕಾಡಾನೆ ತುಳಿತದಿಂದ ಪ್ರಾಣ ಕಳೆದುಕೊಂಡ ದುರ್ದೈವಿ. ಕೊಡಗಿನ ಸೋಮವಾರಪೇಟೆ ತಾಲೂಕಿನ ಕಾಫಿ ಕ್ಯೂರಿಂಗ್ ನಲ್ಲಿ ಕೆಲಸ ಮುಗಿಸಿಕೊಂಡು ಸ್ನೇಹಿತನೊಂದಿಗೆ ಗುರುವಾರ ರಾತ್ರಿ 10 ಗಂಟೆ ಸಮಯದಲ್ಲಿ ಬೈಕ್ ನಲ್ಲಿ ಊರಿಗೆ ವಾಪಸ್ಸಾಗುತ್ತಿದ್ದಾಗ ಬಾಣಾವರ ಗೇಟ್ ಬಳಿ ರಸ್ತೆ ಬದಿ ಬರುತ್ತಿದ್ದ ಆನೆಗೆ ಎದುರಾಗಿದ್ದಾರೆ.
ತಕ್ಷಣವೇ ಬೈಕ್ ಓಡಿಸುತ್ತಿದ್ದ ಸತೀಶ್ ಎಂಬಾತ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾನೆ. ಹಿಂಬದಿ ಕುಳಿತಿದ್ದ ರವಿ ಎಂಬಾತನನ್ನು ಆನೆ ಅಟ್ಟಾಡಿಸಿಕೊಂಡು ಹೋಗಿ ರಸ್ತೆ ಪಕ್ಕದ ಹೊಲದಲ್ಲಿ ತುಳಿದು ಸಾಯಿಸಿದೆ. ಮೃತನ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತನ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕೆಂದು ಮೃತನ ಪೋಷಕರು ಒತ್ತಾಯಿಸಿದ್ದಾರೆ.