ಮಂಡ್ಯ: ಕಳೆದ ಭಾನುವಾರ ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಕಾರನ್ನು ವೃದ್ಧೆ ವಿಜಯಮ್ಮ ತಡೆದು ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಕುಮಾರಸ್ವಾಮಿ ಅವರ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಮೊಮ್ಮಗಳಿಗೆ ಕೆಲಸ ಕೊಡಿಸಿ ಎಂದು ಕೋರಿದ್ದರು. ಇದೀಗ ಅಜ್ಜಿಯ ಕೋರಿಯನ್ನು ಕುಮಾರಸ್ವಾಮಿ ಅವದು ಈಡೇರಿಸಿದ್ದು, ಮೊಮ್ಮಗಳಿಗೆ ಕೆಲಸ ಕೊಡಿಸಿದ್ದಾರೆ.
ಅಂದು ಅಜ್ಜಿ ನಮಗೆ ಯಾವುದೇ ಜಮೀನು ಇಲ್ಲ, ತುಂಬಾ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೇವೆ. ದಯವಿಟ್ಟು ನನ್ನ ಮೊಮ್ಮಗಳಿಗೆ ಒಂದು ಕೆಲಸ ಕೊಡಿಸಿ. ನಮ್ಮ ಕುಟುಂಬದ ಕಷ್ಟವನ್ನು ನಿವಾರಿಸಿ ಎಂದು ಕುಮಾರಸ್ವಾಮಿ ಅವರ ಬಳಿ ಕಣ್ಣೀರಿಟ್ಟಿದ್ದರು. ಈ ವೇಳೆ ಕುಮಾರಸ್ವಾಮಿ ನಿಮ್ಮ ಮೊಮ್ಮಗಳನ್ನು ನಮ್ಮ ಬೆಂಗಳೂರಿನ ಕಚೇರಿಗೆ ಕಳಿಸಿ ನಾನು ಕೆಲಸ ಕೊಡಿಸುತ್ತೇನೆ ಅಂತಾ ಹೇಳಿದ್ದರು.
ಇಂದು ವಿಜಯಮ್ಮ ಅವರ ಮೊಮ್ಮಗಳು ನಾಗರತ್ನ ಅವರು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ನಾನು ಬಿಕಾಂ ಮಾಡಿದ್ದೇನೆ. ನನ್ನ ಅಜ್ಜಿ ನಿಮ್ಮನ್ನು ಭೇಟಿ ಮಾಡು ಕೆಲಸ ಕೊಡಿಸುತ್ತಾರೆ ಎಂದು ಹೇಳಿದ್ದರು. ದಯವಿಟ್ಟು ಕೆಲಸ ಕೊಡಿಸಿ ಎಂದು ಕೇಳಿಕೊಂಡರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಖಾಸಗಿ ಕಂಪನಿಯ ಎಂಡಿ ಒಬ್ಬರಿಗೆ ಕರೆ ಮಾಡಿ ಕೆಲಸ ಕೊಡುವಂತೆ ಹೇಳಿದರು. ಅದರಂತೆ ಖಾಸಗಿ ಕಂಪನಿಯೊಂದರಲ್ಲಿ ವಿಜಯಮ್ಮ ಅವರ ಮೊಮ್ಮಗಳು ನಾಗರತ್ನಗೆ ಕೆಲಸ ದೊರಕಿದೆ.