ಕೋಲಾರ : ಕೋಲಾರದ ಈ ಊರಲ್ಲಿ ಸಂಕ್ರಾಂತಿ ಅಂದ್ರೆನೆ ಭಯ, ಶೋಕ. ಸಂಕ್ರಾಂತಿ ಬಂತು ಅಂದ್ರೆ ಈ ಹಳ್ಳಿಯ ಜನ ಸೂತಕದ ರೀತಿ ಹಬ್ಬ ಆಚರಣೆ ಮಾಡುತ್ತಾರೆ ಹಾಗೂ ಹಬ್ಬ ಆಚರಿಸಿದರೆ ಊರಿಗೆ ಸಮಸ್ಯೆಯಾಗುತ್ತದೆ. ಜನ ಜಾನುವಾರು ಸಾಯುತ್ತವೆ ಎನ್ನುವ ನಂಬಿಕೆಯಿಂದ ಸಂಕ್ರಾಂತಿ ಹಬ್ಬ ಆಚರಿಸುವುದನ್ನು ಬಿಟ್ಟು ಬಿಟ್ಟಿದ್ದಾರೆ.
ಇದು ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಆಚರಣೆ ಮಾಡಿಕೊಂಡು ಬಂದಿರುವ ಪದ್ದತಿ ಎನ್ನುತ್ತಾರೆ ಹಿರಿಯರು. ಒಂದು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಯಿರುವ ಈ ಗ್ರಾಮದಲ್ಲಿ ಇಂದಿಗೂ ಇಂತಹ ಮೌಢ್ಯಕ್ಕೆ ಜೋತು ಬಿದ್ದಿದ್ದಾರೆ.
ಇತ್ತೀಚೆಗಂತೂ ಈ ಊರಿನಲ್ಲಿ ವಿದ್ಯಾವಂತರು ಮತ್ತು ಉತ್ತಮ ಸರ್ಕಾರಿ ಹುದ್ದೆಗಳಲ್ಲಿದ್ದಾರೆ. ಈ ಊರಿಗೆ ಕೋಲಾರ ನಗರ ಕೂಗಳತೆ ದೂರದಲ್ಲಿದೆ. ಆದರೆ ಇವರು ಕೂಡಾ ಹಳೆ ಕಾಲದವರಂತೆ ಹಿಂದಿನ ಪದ್ದತಿಯ ಮೂಢನಂಬಿಕೆಯನ್ನು ಈಗಲೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಸಂಕ್ರಾಂತಿ ಹಬ್ಬವನ್ನು ಮಾಡಿದರೆ ಊರಿಗೆ ಕೆಟ್ಟದಾಗುತ್ತದೆ ಎಂದು ಹಿಂದಿನವರು ಹೇರಿರುವ ಆಧಾರವಿಲ್ಲದ ನಿಷೇಧವನ್ನು ಇನ್ನೂ ಪಾಲಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಸಂಕ್ರಾಂತಿ ಹಬ್ಬವನ್ನು ಮಾಡುವುದೇ ಇಲ್ಲ, ಸಂಕ್ರಾಂತಿ ಹಬ್ಬ ಬಂತು ಅಂದರೆ ಈ ಗ್ರಾಮಕ್ಕೆ ಗ್ರಾಮವೇ ಭಯದ ವಾತಾವರಣ ಆವರಿಸುತ್ತದೆ.
ಪಕ್ಕದ ಊರುಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಆದರೆ ಅರಾಭಿಕೊತ್ತನೂರಲ್ಲಿ ಮಾತ್ರ ಇವತ್ತು ಸೂತಕದ ಛಾಯೆಯಲ್ಲಿ ಮುಳಗಿರುತ್ತದೆ. ಈ ಹಿಂದೆ ಹಬ್ಬ ಮಾಡಿದ ವೇಳೆ ದನಕರುಗಳನ್ನ ಓಡಿಸಲಾಯಿತು. ಹೀಗೆ ಓಡಿಸಿದ ಜನ ಜಾನುವಾರು ಯಾರೂ ವಾಪಸ್ ಬಂದಿಲ್ಲ. ಅದಾದ ಬಳಿಕ ಗ್ರಾಮದಲ್ಲಿದ್ದ ಎಲ್ಲಾ ದನ ಕರುಗಳು ಇದಕ್ಕಿದ್ದಂತೆ ಸಾವನ್ನಪ್ಪುತ್ತಿದ್ದವು, ಇದರಿಂದ ಬೆಚ್ಚಿ ಬಿದ್ದ ಜನರು ಇಂದಿಗೂ ಹಬ್ಬವನ್ನ ಶೋಕದ ರೀತಿಯಲ್ಲಿ ಆಚರಣೆ ಮಾಡುತ್ತಾರೆ.
ಈ ಹಿಂದೆ ಅರಾಭಿಕೊತ್ತನೂರಿಗೆ ದೊಡ್ಡ ಕಾಯಿಲೆಯೊಂದು ವಕ್ಕರಿಸಿ ಊರಲ್ಲಿದ್ದ ದನ-ಕರುಗಳು ಇದ್ದಕ್ಕಿದ್ದಂತೆ ಸಾಯುವುದಕ್ಕೆ ಶುರುವಾಗಿತ್ತು. ಆಗ ದಿಕ್ಕು ತೋಚದಂತಾದ ಊರಿನ ಹಿರಿಯರು ನಡಿಯುತ್ತಿರುವ ಅನಾಹುತವನ್ನು ನಿಲ್ಲಿಸುವಂತೆ ಬಸವಣ್ಣನಲ್ಲಿ ಕೋರಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದಲ್ಲಿ ದನ-ಕರುಗಳಿಗೆ ಮಾಡುವ ಪೂಜೆ ಪುನಸ್ಕಾರವನ್ನು ಬೇರೊಂದು ದಿನ ನಿನಗೆ ಮಾಡುತ್ತೇವೆ ಎಂದು ಪ್ರಾರ್ಥನೆಯನ್ನು ಮಾಡಿಕೊಂಡಿದ್ದಾರೆ. ಆಗ ಹಸುಗಳ ಸಾವು ನಿಲ್ಲಿತು. ಹಾಗಾಗಿ ಸಂಕ್ರಾಂತಿ ಹಬ್ಬವನ್ನು ಊರಲ್ಲಿ ಮಾಡದಿರುವ ಪ್ರತೀತಿಯು ಅಂದಿನಿಂದಲೂ ಜಾರಿಗೆ ಬಂದಿದೆ. ಸಂಕ್ರಾಂತಿ ಅದ ಮೇಲೆ ಒಂದು ದಿನ ಗ್ರಾಮಸ್ಥರು ಊರಲ್ಲಿರುವ ಬಸವಣ್ಣನ ದೇವಸ್ಥಾನಕ್ಕೆ ಹಸುಗಳನ್ನು ಅಲಂಕಾರ ಮಾಡಿಕೊಂಡು ಹೋಗಿ ಪೂಜೆ ಮಾಡಿಕೊಂಡು ಬರುತ್ತಾರೆ.