ಬೆಂಗಳೂರು: ಬಿಜೆಪಿಯಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು, ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಮಾಜಿ ಶಾಸಕ ಮುನಿರತ್ನಗೆ ಟಿಕೆಟ್ ನೀಡಲೇಬೇಕೆಂದು ಇಂದು ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯಾಧ್ಯಕ್ಷರಾದ ಶ್ರೀ @nalinkateel ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ಉಪಸ್ಥಿತಿಯಲ್ಲಿ ಇಂದು ಪಕ್ಷದ ಕೋರ್ ಕಮಿಟಿ ಸಭೆ ನಡೆಯಿತು.
ಕೆ. ಜಿ. ಹಳ್ಳಿ ಮತ್ತು ಡಿ. ಜೆ. ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಪಟ್ಟ ಸತ್ಯಶೋಧನಾ ಸಮಿತಿ ಸಲ್ಲಿಸಿದ ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
1/3 pic.twitter.com/mJu3ew9ThT
— BJP Karnataka (@BJP4Karnataka) October 1, 2020
ಬಿಜೆಪಿ ಕೋರ್ ಕಮಿಟಿ ಸಬೆಯಲ್ಲಿ ಮಾತನಾಡಿರುವ ಅವರು, ಸರ್ಕಾರ ರಚಿಸಲು ನಾವು ಮುನಿರತ್ನ ಬೆಂಬಲ ಪಡೆದಿದ್ದೇವೆ. ಹೀಗಾಗಿ ಅವರಿಗೆ ಕೊಟ್ಟ ಮಾತಿನಂತೆ ಟಿಕೆಟ್ ನೀಡಲೇಬೇಕು. ಬೇರೆ ದಾರಿ ಇಲ್ಲ ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ.
ತುಳಸಿ ಮುನಿರಾಜು ಗೌಡ ಅವರಿಗೆ ನಿಗಮ ಮಂಡಳಿ ಕೊಟ್ಟರೂ ಬೇಡ ಎನ್ನುತ್ತಿದ್ದಾರೆ. ಇದಕ್ಕೆ ಏನು ಮಾಡುವುದೋ ತಿಳಿಯದಾಗಿದೆ ಎಂದು ಸಿಎಂ ಹೇಳಿದ್ದಾರೆ. ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಚುನಾವಣಾ ಸಮಿತಿಗೆ ಇಬ್ಬರ ಹೆಸರೂ ಕಳುಹಿಸೋಣ. ಅಲ್ಲಿಯೇ ತೀರ್ಮಾನ ಆಗಲಿ ಎಂದರು. ಹೀಗಾಗಿ ಇಬ್ಬರ ಹೆಸರನ್ನು ದೆಹಲಿಗೆ ಕಳುಹಿಸಲು ಕೋರ್ ಕಮಿಟಿ ಸಭೆ ತೀರ್ಮಾನಿಸಿತು. ಮೂಲಗಳ ಪ್ರಕಾರ ಮುನಿರತ್ನ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.
ಶಿರಾ ಅಭ್ಯರ್ಥಿಯಾಗಲು ಪಕ್ಷದಲ್ಲಿ ಪೈಪೋಟಿ ಹೆಚ್ಚಿದ್ದು, ಮೂವರ ಹೆಸರನ್ನು ಹೈಕಮಾಂಡ್ಗೆ ಕಳಿಸಲು ನಿರ್ಧರಿಸಲಾಗಿದೆ. ಇನ್ನು ಆರು ಕ್ಷೇತ್ರಗಳ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಆರ್ಆರ್ ನಗರ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾಗಿ ಸಚಿವರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಆರ್.ಅಶೋಕ್, ಎಸ್.ಆರ್.ವಿಶ್ವನಾಥ್, ಅರವಿಂದ ಲಿಂಬಾವಳಿಯವರನ್ನು ಕೋರ್ ಕಮಿಟಿ ಸಭೆ ನಿರ್ಧರಿಸಿದೆ. ಶಿರಾ ಕ್ಷೇತ್ರಕ್ಕೆ ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಎಂಎಲ್ಸಿ ರವಿ ಕುಮಾರ್, ಸಂಸದ ಪಿ.ಸಿ.ಮೋಹನ್, ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಉಸ್ತುವಾರಿ ನೀಡಲಾಗಿದೆ.