ಕ್ಯಾಂಟೀನ್‍ನಲ್ಲಿ ಸಚಿವರು, ಶಾಸಕರ ಗಲಾಟೆ – ಹೊಡೆದಾಟದ ಹಂತಕ್ಕೆ ಹೋದ ಜಗಳ

2 Min Read

ಬೆಂಗಳೂರು: ಒಂದೆಡೆ ಕೊರೊನಾ ನಡುವೆಯೂ ಇಂದಿನಿಂದ ಅಧಿವೇಶನ ಶುರುವಾಗಿದೆ. ಮತ್ತೊಂದೆಡೆ ಭೂ ಸುಧಾರಣೆ, ವಿದ್ಯುತ್ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ರೈತ ಮುಖಂಡರು ರಸ್ತೆಗಿಳಿದಿದ್ದು, ಸಿಲಿಕಾನ್ ಸಿಟಿಯಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಮಧ್ಯೆ ಕ್ಯಾಂಟೀನ್‍ನಲ್ಲಿ ಸಚಿವರು ಮತ್ತು ಶಾಸಕರ ಗಲಾಟೆ ನಡೆದಿದೆ.

ವಿಧಾನಸೌಧದ ಲಾಂಜ್‍ನಲ್ಲಿರುವ ಕ್ಯಾಂಟೀನ್‍ನಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಸಚಿವ ನಾರಾಯಣಗೌಡ ನಡುವೆ ಜಗಳ ನಡೆದಿದೆ. ಈ ಗಲಾಟೆ ಹೊಡೆದಾಟದ ಹಂತಕ್ಕೂ ಹೋಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

 

ಕಡೂರು ಕ್ಷೇತ್ರಕ್ಕೆ ತೋಟಗಾರಿಕೆ ಇಲಾಖೆಯಿಂದ ನೀಡಬೇಕಿದ್ದ ಅನುದಾನ ತಾರತಮ್ಯವಾದ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ಸಚಿವ ನಾರಾಯಣಗೌಡ ಅವರಿಗೆ ಏಕವಚನದಲ್ಲಿ ಬೈದಿದ್ದಾರೆ ಎನ್ನಲಾಗಿದೆ. ಈ ಗಲಾಟೆ ಮಾಜಿ ಸಿಎಂ ಸಿದ್ದರಾಮಯ್ಯ, ಈಶ್ವರಪ್ಪ, ಸೋಮಣ್ಣ, ಸಿ.ಡಿ.ರವಿ ಎಲ್ಲರ ಸಮ್ಮುಖದಲ್ಲಿ ನಡೆದಿದೆ.

 

ಬೆಳ್ಳಿ ಪ್ರಕಾಶ್ ಮೊದಲ ಬಾರಿ ಗೆದ್ದು ಕಡೂರು ಶಾಸಕರಾಗಿದ್ದಾರೆ. ಅನೇಕ ತಿಂಗಳ ಹಿಂದೆಯೇ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಸಚಿವರು ಅನುದಾನ ಕೊಡದೇ ಸತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧನಾಗೊಂಡಿದ್ದ ಶಾಸಕ ಬೆಳ್ಳಿ ಕ್ಯಾಂಟೀನ್‍ನಲ್ಲಿ ಅನುದಾನ ಬಿಡುಗಡೆಯ ಮಾಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

ಶಾಸಕ-ಸಚಿವರ ಮಾತಿನ ಜಗಳ:
ಬೆಳ್ಳಿ ಪ್ರಕಾಶ್: ನನ್ನ ಕ್ಷೇತ್ರದ ಕೆಲಸ ಮಾಡಿಕೊಡದವ ನೀನು ಎಂಥಾ ಸಚಿವ.
ಸಚಿವ ನಾರಾಯಣ ಗೌಡ: ಆಫೀಸ್‍ಗೆ ಬಂದು ಮಾತಾಡು. ಇಲ್ಲಿ ಹೀಗೆ ಮಾತಾಡೊದಲ್ಲ. ಮೊದಲು ಮಾಸ್ಕ್ ಹಾಕ್ಕೊಂಡು ಮಾತಾಡು.
ಬೆಳ್ಳಿ ಪ್ರಕಾಶ್: ಮಾಸ್ಕ್ ಹಾಕಿಕೊಳ್ಳುವುದು ನನಗೆ ಗೊತ್ತು. ನಿನ್ನ ಆಫೀಸ್‍ಗೆ ಏನ್ ಬರೋದು!
ಸಚಿವ ನಾರಾಯಣ ಗೌಡ: ಸರಿಯಾಗಿ ಮಾತಾಡು. ಇಲ್ಲಿ ಹೀಗೆಲ್ಲ ಮಾತಾಡ್ತಿಯಾ, ನಾನು ಒಬ್ಬ ಸಚಿವ. ನನಗೂ ಮಾತಾಡೊಕೆ ಬರುತ್ತೆ.

 

ಈ ಗಲಾಟೆಯಲ್ಲಿ ಸಚಿವ ನಾರಾಯಣ ಗೌಡರಿಗೆ ಏಟು ಬಿದ್ದಿದ್ದು, ಶಾಸಕ ಬೆಳ್ಳಿ ಪ್ರಕಾಶ್ ಅವರ ಹೊಟ್ಟೆಗೆ ಗುದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಜೆಡಿಎಸ್ ಶಾಸಕ ಅನ್ನದಾನಿ ಬಂದು ಹೊಡೆದಾಟ ಬಿಡಿಸಿದ್ದಾರೆ. ಸಿದ್ದರಾಮಯ್ಯ ಕಣ್ಣ ಮುಂದೆಯೇ ಶಾಸಕ ಬೆಳ್ಳಿ ಪ್ರಕಾಶ್ ಮುಷ್ಟಿ ಬಿಗಿಹಿಡಿದು ನಾರಾಯಣ ಗೌಡರ ಹೊಟ್ಟೆಗೆ ಬಲವಾಗಿ ಗುದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಶಾಸಕರು ಕೇಳಿದರೂ ಕ್ಷೇತ್ರಕ್ಕೆ ಅನುದಾನ ನೀಡದೆ ಸಚಿವರು ಸತಾಯಿಸುತ್ತಿರುವುದರಿಂದ ಇನ್ನೂ ಸಾಮಾನ್ಯ ಜನರು ಮನವಿ ಮಾಡಿದರೆ ಕೆಲಸ ಮಾಡಿಕೊಡುತ್ತಾರ ಎಂಬ ಪ್ರಶ್ನೆ ಎದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *