ಬೆಂಗಳೂರು: ಮಗಳು ಅಂತರ್ಜಾತಿ ವಿವಾಹವಾದ ಹಿನ್ನೆಲೆಯಲ್ಲಿ ಮನನೊಂದ ಅಪ್ಪ ಅಮ್ಮ ಮನೆ ಮುಂದಿನ ನೀರಿನ ಸಂಪ್ಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾರೋಕೇತನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಲಿಂಗಪ್ಪ (51) ಮತ್ತು ಚಂದ್ರಕಲಾ (45) ಆತ್ಮಹತ್ಯೆಗೆ ಶರಣಾದ ದಂಪತಿ. ಪ್ರೀತಿಯಿಂದ ಬೆಳೆಸಿದ ಮಗಳು ಅಂತರ್ಜಾತಿ ವಿವಾಹವಾದ ಹಿನ್ನೆಲೆ ಮನನೊಂದ ಹೆತ್ತವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಗಳು ಗುರುವಾರ ಮತ್ತೊಂದು ಸಮುದಾಯದ ಹುಡುಗನನ್ನು ಪ್ರೀತಿಸಿ ಆತನ ಜೊತೆಯೇ ಮದುವೆಯಾಗಿ ಮನೆ ಬಿಟ್ಟು ಹೋಗಿದ್ದಳು. ಮದುವೆಯ ವಿಚಾರ ತಿಳಿದು ಮನನೊಂದ ದಂಪತಿ ಮನೆಯ ಮುಂದಿನ ನೀರಿನ ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ನಮ್ಮ ಸಾವಿಗೆ ನಾವೇ ಜವಾಬ್ದಾರರು ಎಂದು ಡೆತ್ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.
ಮಾಹಿತಿ ತಿಳಿದು ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹಗಳನ್ನು ಸಂಪಿನಿಂದ ಹೊರತೆಗೆದು ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.