ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ರಿಕವರಿ ರೇಟ್ ಕಡಿಮೆಯಾಗಿದ್ದು, ಇದನ್ನು ಹೆಚ್ಚಿಸಲು ಆರೋಗ್ಯ ಇಲಾಖೆ ಯೋಗದ ಮೊರೆ ಹೋಗಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ದಿನಕ್ಕೆ ಎರಡು ಸಾವಿರ ಜನರಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದು, ಸರ್ಕಾರ ಸೋಂಕಿತರಿಗೆ ಬೆಡ್ ಒದಗಿಸಲು ಕಷ್ಟಪಡುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ ನಡುವೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿರುವುದು ಆರೋಗ್ಯ ಇಲಾಖೆಗೆ ಹೊಸ ತಲೆನೋವಾಗಿದೆ.
ಹೀಗಾಗಿ ಆರೋಗ್ಯ ಇಲಾಖೆ ಸೋಂಕಿತರ ರಿಕವರಿ ರೇಟ್ ಹೆಚ್ಚಿಸಲು ಹೊಸ ಪ್ಲಾನ್ ಮಾಡಿದ್ದು, ಯೋಗ ಮಂತ್ರದ ಮೊರೆ ಹೋಗಿದೆ. ಹೀಗಾಗಿ ಕೊರೊನಾ ವೈರಸ್ಗೆ ರಾಮಭಾಣವಾಗಿರುವ ಪ್ರಾಣಾಯಾಮವನ್ನು ಕೋವಿಡ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಮಾಡಿಸುತ್ತಿದೆ. ಈ ಮೂಲಕ ಯೋಗ ಥೆರಪಿ ಬಳಸಿ ಕೊರೊನಾ ಸೋಂಕಿತರು ಬೇಗ ಗುಣಮುಖರಾಗುವಂತೆ ಮಾಡಿ ಡಿಸ್ಚಾರ್ಜ್ ಮಾಡುವ ಹೊಸ ಐಡಿಯಾವನ್ನು ಆರೋಗ್ಯ ಇಲಾಖೆ ಮಾಡಿದೆ.
ಈಗ ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಕಡ್ಡಾಯ ಯೋಗಭ್ಯಾಸ ಮಾಡಿಸಲು ಆರೋಗ್ಯ ಇಲಾಖೆ ನಿರ್ಧಾರ ಮಾಡಿದೆ. ಹೀಗಾಗಿ ರವಿಶಂಕರ್ ಗುರೂಜಿ ಆಶ್ರಮದ ಕೋವಿಡ್ ಕೇರ್ ಸೆಂಟರ್ ಮತ್ತು ಆಶ್ರಮ ಸಿಸಿಸಿಯಲ್ಲೂ ಪ್ರತಿಯೊಬ್ಬ ರೋಗಿಗೂ ಕಡ್ಡಾಯ ಯೋಗಭ್ಯಾಸಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಕೊರೊನಾ ರೋಗಿಗಳ ಒತ್ತಡ ನಿವಾರಿಸಲು ಇಲಾಖೆ ಈ ಹೊಸ ಪ್ರಯತ್ನ ಮಾಡುತ್ತಿದೆ. ಅದರಂತೆ ಸತತ ಒಂದು ಗಂಟೆಗಳ ಕಾಲ ಸೋಂಕಿತರಿಗೆ ಸಿಬ್ಬಂದಿ ಯೋಗಭ್ಯಾಸ ಮಾಡಿಸುತ್ತಿದ್ದಾರೆ.