ಚಿಕ್ಕಬಳ್ಳಾಪುರ: ಸೋಂಕಿತರನ್ನ ಗುಣಮುಖ ಮಾಡಿ ಜನರ ನೆಮ್ಮದಿ ಕಾಪಾಡುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಮಹಾರಾಷ್ಟ್ರದಿಂದ ಆಗಮಿಸಿದ ಕಾರ್ಮಿಕರು ನಿದ್ದೆಗೆಡಿಸಿದ್ದಾರೆ. ಇದರ ಮಧ್ಯೆ ಗರ್ಭಿಣಿಗೆ ದೃಢವಾದ ಸೋಂಕು ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿದೆ.
ಮುಂಬೈನಿಂದಲೇ ಮಹಾಮಾರಿ ಕೊರೊನಾ ಜಿಗಿತ ಮತ್ತಷ್ಟು ಮುಂದುವರಿದಿದೆ. ಜಿಲ್ಲೆಯಲ್ಲಿ ಭಾನುವಾರ ಮತ್ತೆ 27 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಇಡೀ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ 126ಕ್ಕೆ ಏರಿದೆ. ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರಂಭದಲ್ಲಿ ಕಾಣಿಸಿಕೊಂಡ 26 ಮಂದಿ ಕೊರೊನಾ ಸೋಂಕಿತರ ಪೈಕಿ ಇಬ್ಬರು ಸಾವನ್ನಪ್ಪಿದರೆ, 18 ಮಂದಿ ಗುಣಮುಖರಾಗಿ ಕೇವಲ 6 ಸಕ್ರಿಯ ಪ್ರಕರಣಗಳು ಮಾತ್ರ ಉಳಿದುಕೊಂಡಿದ್ದವು.
ಜಿಲ್ಲೆಗೆ ಬರೀ ಮಹಾರಾಷ್ಟ್ರ ವಲಸಿಗರ ಕಂಟಕ ಅಂತ ನಿರಾಳವಾಗಿದ್ದ ಜಿಲ್ಲಾಡಳಿತಕ್ಕೆ ಬಾಗೇಪಲ್ಲಿಯ 22ನೇ ವಾರ್ಡಿನ 23 ವರ್ಷದ ಗರ್ಭಿಣಿಗೆ ಕೊರೊನಾ ದೃಢವಾಗಿದ್ದು, ಈ ಹೊಸ ಪ್ರಕರಣ ಮತ್ತಷ್ಟು ಆತಂಕ ಮೂಡಿಸಿದೆ. ಇವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಈಕೆಯ ತಂದೆ ಮಕ್ಕಳ ನಾಟಿ ವೈದ್ಯನಾಗಿರೋದರಿಂದ ಬಾಗೇಪಲ್ಲಿ ಗಡಿಗೆ ಹೊಂದಿಕೊಂಡಿರುವ ಆಂಧ್ರ ಪ್ರದೇಶದ ಜನ ಬಂದೋಗಿರುವ ಶಂಕೆ ಇದೆ ಎಂದು ಡಿಸಿ ಲತಾ ತಿಳಿಸಿದ್ದಾರೆ.
ಕೊರೊನಾ ಸೋಂಕಿತರಿಂದ ಮುಕ್ತವಾಗಬೇಕಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಮಹಾರಾಷ್ಟ್ರದಿಂದ ಬಂದ ಮುಂಬೈ ವಲಸಿಗರಿಂದ ಶತಕ ದಾಟುವಂತೆ ಮಾಡಿದೆ. ಮತ್ತೊಂದೆಡೆ ಬಾಗೇಪಲ್ಲಿಯಲ್ಲಿ ಹೊಸದಾಗಿ ಬಂದ ಸೋಂಕು ಸಹ ಜಿಲ್ಲಾಡಳಿತಕ್ಕೆ ತಲೆನೋವು ತಂದಿಟ್ಟಿದೆ.