– ಚನ್ನರಾಯಪಟ್ಟಣದಲ್ಲೇ 42 ಮಂದಿಗೆ ಸೋಂಕು
ಹಾಸನ: ಹಾಸನ ಜಿಲ್ಲೆಯಲ್ಲಿ ಹೊಸದಾಗಿ 13 ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 67 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅರ್.ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಇಂದು ವರದಿಯಾದ ಪ್ರಕರಣದಲ್ಲಿ ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ ಎಂದು ತಿಳಿಸಿದರು. ಹಾಸನ ಜಿಲ್ಲೆಯ ಪಾಲಿಗೆ ಮಹಾರಾಷ್ಟ್ರ ದಿಂದ ಅಗಮಿಸಿದವರಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಇಂದು ಸೋಂಕು ಪತ್ತೆಯಾದವರಲ್ಲಿ ಆರು ಮಂದಿ ಹೊಳೆನರಸೀಪುರ ತಾಲೂಕು ಹಾಗೂ 7 ಮಂದಿ ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದವಾರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಗಿರೀಶ್ ಹೇಳಿದರು.
ಈವರೆಗಿನ ವರದಿಯಂತೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ಗರಿಷ್ಠ 42 ಮಂದಿ ಸೋಂಕಿತರು ಪತ್ತೆಯಾಗಿದ್ದು, ಹೊಳೆನರಸೀಪುರ 16, ಆಲೂರು ತಾಲೂಕಿನಲ್ಲಿ 3, ಅರಕಲಗೂಡು 2, ಅರಸೀಕೆರೆ 1, ಹಾಸನದಲ್ಲಿ ಮೂರು ಪ್ರಕರಣ ದಾಖಲಾಗಿವೆ ಎಂದು ಅವರು ವಿವರ ಒದಗಿಸಿದರು. ಹಾಸನ ತಾಲೂಕಿನ ಮೂರು ಪ್ರಕರಣಗಳಲ್ಲಿ ಎರಡು ತಮಿಳುನಾಡು ಮೂಲದಿಂದ ಬಂದಿದ್ದು, ಉಳಿದ ಎಲ್ಲ 65 ಪ್ರಕರಣಗಳು ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದರು.