ಕಲಬುರಗಿ: ಅಕ್ರಮವಾಗಿ ಸಂಗ್ರಹಿಸಿದ್ದ 1 ಸಾವಿರಕ್ಕೂ ಅಧಿಕ ಟನ್ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಲಾಕ್ಡೌನ್ ಸಮಯದಲ್ಲಿ ಬಡವರು ಹಸಿವಿನಿಂದ ಬಳಲಬಾರದು ಸರ್ಕಾರ ಮುಂಗಡವಾಗಿ ಪಡಿತರ ವಿತರಣೆ ಮಾಡುತ್ತಿದ್ದಾರೆ. ಆದ್ರೆ ಬಡವರ ಪಾಲಿನ ಅಕ್ಕಿ ಮಾತ್ರ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ. ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಸಂಗ್ರಹಣೆ ವಿಷಯ ತಿಳಿದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಅಧಿಕಾರಿಗಳು ಗೋಡೌನ್ ಮೇಲೆ ದಾಳಿ ನಡೆಸಿ ಪಡಿತರವನ್ನು ವಶಪಡಿಸಿಕೊಂಡಿದ್ದಾರೆ. ಗೋಡೌನ್ ಮೇಲೆ ದಾಳಿ ಬಳಿಕ ಮಾತನಾಡಿದ ಅಧಿಕಾರಿ, ಈಗಾಗಲೇ ಗೋದಾಮಿನಲ್ಲಿರುವ ಅಕ್ಕಿಯನ್ನು ವಶಪಡಿಸಿಕೊಂಡಿದ್ದೇವೆ. ಇದೇ ರೀತಿ ಮತ್ತೊಂದು ಕಡೆ ಅಕ್ಕಿ ಸಂಗ್ರಹಣೆ ಮಾಡಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.