– ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಬೆಂಗಳೂರು: ತಂದೆಯೊಂದಿಗೆ ಬೈಕಿನಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿಯ ತಲೆಯ ಮೇಲೆ ಒಣಗಿದ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ರಾಮಮೂರ್ತಿ ನಗರದಲ್ಲಿ ನಡೆದಿದೆ.
ಕೌದೇನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಎಂಟು ವರ್ಷದ ಬಾಲಕಿ ತ್ರಿಷಾ ತಲೆಗೆ ಗಂಭೀರವಾಗಿ ಗಾಯವಾಗಿದೆ. ತ್ರಿಷಾ ಮತ್ತು ತಂದೆ ರಾಜು ಬೆಳಗಿನ ಜಾವ ಶಾಲೆಗೆ ಎಂದು ತಮ್ಮ ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಬೈಕಿನಲ್ಲಿ ಹೋಗುತ್ತಿದ್ದ ತಂದೆ ಮಗಳ ಮೇಲೆ ಏಕಾಏಕಿ ಒಣಗಿದ್ದ ಮರದ ಕೊಂಬೆ ಬಿದ್ದಿದೆ.
ಬಾರಿ ಗಾತ್ರದ ಮರದ ಕೊಂಬೆ ಬಿದ್ದ ಪರಿಣಾಮ ಬೈಕಿನಲ್ಲಿ ಹಿಂದೆ ಕೂತಿದ್ದ ತ್ರಿಷಾ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ತಂದೆ ರಾಜುಗೂ ಸಣ್ಣಪುಟ್ಟ ಗಾಯವಾಗಿದೆ. ಸದ್ಯ ಬಾಲಕಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಒಣಗಿದ ಮರದ ಕೊಂಬೆಗಳನ್ನು ತೆರವು ಮಾಡುವಂತೆ ಇಲ್ಲಿನ ಸ್ಥಳೀಯರು ಬಿಬಿಎಂಪಿಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಒಣ ಮರದ ಕೊಂಬೆ ವಿದ್ಯಾರ್ಥಿನಿ ಮೇಲೆ ಬಿದ್ದಿರೋ ದೃಶ್ಯ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಿಬಿಎಂಪಿ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಾಲಕಿ ಪೋಷಕರು ಮುಂದಾಗಿದ್ದಾರೆ.