ಪೌರ ಕಾರ್ಮಿಕರನ್ನು ಸನ್ಮಾನಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಕಾರ್ಪೋರೇಟರ್

Public TV
1 Min Read
dvg corporater

ದಾವಣಗೆರೆ: ಪೌರ ಕಾರ್ಮಿಕರೆಂದರೆ ಮೂಗು ಮುರಿಯುವ ಜನಪ್ರತಿನಿಧಿಗಳ ಮಧ್ಯೆ ಕಾರ್ಪೋರೇಟರ್ ಒಬ್ಬರು ಅವರನ್ನು ಸನ್ಮಾನಿಸಿ, ಅವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಅವರು ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಗರದ ವಿಶ್ವೇಶ್ವರಯ್ಯ ಪಾರ್ಕ್‍ನಲ್ಲಿ ಪೌರಕಾರ್ಮಿಕರು ಸ್ವಚ್ಛ ಭಾರತ ಅಭಿಯಾನದ ಸೈನಿಕರು ಎಂಬ ವಿಶೇಷ ಕಾರ್ಯಕ್ರಮದಲ್ಲಿ ಅವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

dvg corporater 2

ಸನ್ಮಾನ ಮಾತ್ರವಲ್ಲದೆ ಅವರಿಗೆ ಉಡುಗೊರೆಯನ್ನು ಸಹ ನೀಡಿದ್ದಾರೆ. ಆರಂಭದಲ್ಲಿ ತಮ್ಮ ವಾರ್ಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪೌರ ಕಾರ್ಮಿಕರಿಗೆ ಸಿಹಿ ಹಂಚಿ, ಸನ್ಮಾನ ಮಾಡಿ, ಹೊಸ ಬಟ್ಟೆಗಳನ್ನು ನೀಡಿದ್ದಾರೆ. ಮಾತ್ರವಲ್ಲದೆ ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಅವರ ಹೆಸರಿನಲ್ಲಿ ನೋಂದಾಯಿಸಿರುವ ತಲಾ 2 ಲಕ್ಷ ರೂ. ಮೌಲ್ಯದ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಪಾಲಿಸಿ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಪಾಲಿಸಿಯನ್ನು ಮಾಡಿಸಿಕೊಟ್ಟಿದ್ದಾರೆ. ಈ ಮೂಲಕ ಅವರೊಂದಿಗೆ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

WhatsApp Image 2020 02 22 at 2.43.35 PM e1582367692587

ಈ ಕುರಿತು ಪಾಲಿಕೆ ನೂತನ ಮೇಯರ್ ಅಜಯ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಸನ್ನ ಕುಮಾರ್ ಚಿಂತನೆಗಳು ಸಮಾಜಕ್ಕೆ ಅದ್ಭುತ ಸಂದೇಶವಾಗಿವೆ. ನಮ್ಮ ಪರಿಸರವನ್ನು ಸ್ವಚ್ಛವಾಗಿಡಲು ದುಡಿಯುವ ಪೌರಕಾರ್ಮಿಕರಿಗಾಗಿ ತಮ್ಮ ಹುಟ್ಟು ಹಬ್ಬದ ಸಂಭ್ರಮವನ್ನು ಅವರೊಂದಿಗೆ ಹಂಚಿಕೊಂಡು ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *