ಬೆಂಗಳೂರು: ಸಿದ್ದಗಂಗಾ ಮಠಕ್ಕೆ ದಾಸೋಹ ರೇಷನ್ ನೀಡುವುದನ್ನು ಸರ್ಕಾರ ನಿಲ್ಲಿಸಿದ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದ್ರೆ ಇತ್ತ ಪುಟಾಣಿ ಕಂದಮ್ಮಗಳಿಗೆ ಅವಧಿ ಮೀರಿದ ಆಹಾರವನ್ನು ನೀಡಿ ಪಬ್ಲಿಕ್ ಟಿವಿ ಕ್ಯಾಮೆರಾ ಕಣ್ಣಿಗೆ ಅಂಗನವಾಡಿ ಶಿಕ್ಷಕಿಯೊಬ್ಬರು ಸಿಕ್ಕಿಬಿದ್ದಿದ್ದಾರೆ.
ಅಂಗನವಾಡಿಯಲ್ಲಿ ಪುಟಾಣಿ ಮಕ್ಕಳಿಗೆ ನೀಡುವ ಆಹಾರದ ಅವಧಿ ಮುಗಿದಿದ್ದರೂ ಮಹಾಲಕ್ಷ್ಮಿ ಲೇಔಟ್ನ ಅಂಗನವಾಡಿಯಲ್ಲಿ ಶಿಕ್ಷಕಿ ಅವನ್ನು ಮಕ್ಕಳಿಗೆ ಹಂಚಿದ್ದಾರೆ. ಇದು ಅವಧಿ ಮೀರಿದೆ ಅಂತಾ ಪೋಷಕರು ವಾಪಸ್ ಅಂಗನವಾಡಿಗೆ ಕೊಟ್ಟು, ಪ್ರಶ್ನಿಸಿದರೆ, “ಅಯ್ಯೋ ಇದೇ ನಮ್ಗೆ ಸರ್ಕಾರದಿಂದ ಬರೋದು, ಏನು ಆಗಲ್ಲ ತಿನ್ನಿಸಿ ಮಕ್ಕಳು ತಿಂತಾರೆ” ಅಂದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಸುದ್ದಿ ತಿಳಿದಾಗ ಪಬ್ಲಿಕ್ ಟಿವಿ ಅಂಗನವಾಡಿಗೆ ಹೋಗಿ ನೋಡೊದಾಗ, ಬೆಳಕೇ ಇಲ್ಲದ ಕೋಣೆಯಲ್ಲಿ ಮಕ್ಕಳು ಆಟವಾಡುತ್ತಿರುವುದು, ಸರ್ಕಾರದಿಂದ ಈ ತಿಂಗಳ ಆಹಾರ ಬಂದಿದ್ದರೂ ಅದನ್ನು ವಿತರಣೆ ಮಾಡದೇ ಇರುವುದು ಬೆಳಕಿಗೆ ಬಂದಿದೆ. ಮಕ್ಕಳು ತಿಂತರೆ ಇದನ್ನೇ ಕೊಡಿ ಎಂದು ಅವಧಿ ಮೀರಿದ ಆಹಾರ ಕೊಟ್ಟು ಮೊದಲು ಪೋಷಕರ ಜೊತೆ ವಾಗ್ವಾದ ನಡೆಸಿದ್ದ ಶಿಕ್ಷಕಿ, ಕ್ಯಾಮೆರಾ ಕಂಡೊಡನೆ ಇಲ್ಲ ಗೊತ್ತಾಗದೇ ತಪ್ಪಾಗಿದೆ, ಬೇರೆ ಕೊಡ್ತೀವಿ ಎಂದು ಡೈಲಾಗ್ ಹೇಳಿದ್ದಾರೆ.
ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ಮಾತಿಗೆ ಈ ಪ್ರಕರಣ ಒಂದು ರೀತಿ ಉದಾಹರಣೆಯಾಗಿದೆ. ಪುಟಾಣಿ ಮಕ್ಕಳು ಈ ರೀತಿ ಅವಧಿಮೀರಿದ ಆಹಾರ ಸೇವಿಸಿದರೆ ಅವರ ಆರೋಗ್ಯದ ಗತಿ ಏನು? ಹೀಗೆ ನಿರ್ಲಕ್ಷ್ಯ ಮೆರೆಯುವ ಸಿಬ್ಬಂದಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.