ಬೆಂಗಳೂರು: ಸಂಪುಟ ವಿಸ್ತರಣೆ ಕಸರತ್ತು, ಪ್ರತಿನಿತ್ಯ ಪಕ್ಷದ ಹೈಕಮಾಂಡ್ ಮತ್ತು ಸಿಎಂ ನಡುವೆ ಹಗ್ಗಜಗ್ಗಾಟ, ಪರ-ವಿರೋಧ ಗೊಂದಲಗಳ ನಡುವೆ ಪ್ರತಿನಿತ್ಯ ಸುದ್ದಿಯಾಗುತ್ತಿದ್ದರೆ, ಪಕ್ಷದ ಫೈರ್ ಬ್ರ್ಯಾಂಡ್ ನಾಯಕ, ಸಚಿವ ಈಶ್ವರಪ್ಪ ಮಾತ್ರ ಎಲ್ಲೂ ಕಾಣಿಸಿಕೊಳ್ತಾ ಇಲ್ಲ. ಒಂದಲ್ಲ ಒಂದು ವಿಷಯಕ್ಕೆ ಮಾಧ್ಯಮಗಳಲ್ಲಿ ಥಟ್ ಅಂತ ಪ್ರತಿಕ್ರಿಯೆ ನೀಡಿ ಸದಾ ಸುದ್ದಿ, ವಿವಾದದಲ್ಲೇ ಇರುತ್ತಿದ್ದ, ಸಚಿವ ಈಶ್ವರಪ್ಪ ಅವರ ಸದ್ದೇ ಇಲ್ವಲ್ಲಾ ಅಂತ ಕುತೂಹಲ ಮೂಡುವುದು ಸಹಜ.
ಪ್ರತಿಪಕ್ಷಗಳ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯೆ ಇರಬಹುದು, ಪಕ್ಷದೊಳಗಿನ ವಿದ್ಯಮಾನ ಇರಬಹುದು, ಎಲ್ಲದಕ್ಕೂ ಹೇಳಿಕೆ ನೀಡುತ್ತಾ ಸುದ್ದಿಯಲ್ಲಿರುತ್ತಿದ್ದ ಈಶ್ವರಪ್ಪ, ಇಷ್ಟೆಲ್ಲಾ ಆಗುತ್ತಿದ್ರೂ ಕಾಣ್ತಾ ಇಲ್ವಲ್ಲಾಂತ ಎಲ್ಲರಿಗೂ ಅಚ್ಚರಿ.
ಯಾರೇ ಕೂಗಾಡಲಿ ನಾನಂತೂ ಯಾವ ವಿಷಯಕ್ಕೂ ಇಲ್ಲಾಂತ ಈಶ್ವರಪ್ಪ ತೆಪ್ಪಗಿದ್ದಾರೆ ಅಂತ ನೀವು ಅಂದ್ಕೊಂಡಿದ್ರೆ ನಿಮ್ಮ ಊಹೆಗೆ ಉತ್ತರನೇ ಬೇರೆ ಇದೆ. ಪಕ್ಷದಲ್ಲಿ, ಸರ್ಕಾರದಲ್ಲಿ, ರಾಜ್ಯದಲ್ಲಿ ಏನಾದ್ರೂ ಆಗ್ತಾ ಇರಲಿ ಎಂದು ತಲೆಕೆಡಿಸಿಕೊಳ್ಳದ ಸಚಿವ ಈಶ್ವರಪ್ಪ ತಮ್ಮ ಕುಟುಂಬದವರನ್ನು ಕರೆದುಕೊಂಡು ತೀರ್ಥಯಾತ್ರೆಗೆ ಹೋಗಿದ್ದಾರೆ.
ಪತ್ನಿ, ಪುತ್ರ, ಸೊಸೆ, ನಾಲ್ಕು ಹೆಣ್ಣುಮಕ್ಕಳು, ಅಳಿಯಂದಿರು ಮತ್ತು ಮೊಮ್ಮಕ್ಕಳು ಸೇರಿದಂತೆ ಕುಟುಂಬದ 23 ಸದಸ್ಯರೊಂದಿಗೆ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ ತೀರ್ಥಯಾತ್ರೆಗೆ ಹೊರಟಿರುವ ಅವರು ವಾಪಾಸ್ಸಾಗುವುದು ಶುಕ್ರವಾರ ಅಂದ್ರೆ ಜನವರಿ 17ರಂದು. ತಮ್ಮ ಯಾತ್ರೆಯ ಸಂದರ್ಭದಲ್ಲಿ ಕೇದಾರ, ಕಾಶಿ, ಗಂಗೆಯಲ್ಲಿ ಸಂಕ್ರಾಂತಿ ಸ್ನಾನ ಮಾಡಿಯೇ ಬರುತ್ತಾರಂತೆ ಈಶ್ವರಪ್ಪ. ಬಂದ ನಂತರ ಸಂಪುಟ ವಿಸ್ತರಣೆ ಕುಸ್ತಿಯಲ್ಲಿ ಕೈಜೋಡಿಸ್ತಾರಾ..? ಅಂತರ ಕಾಯ್ದುಕೊಳ್ತಾರಾ ಅನ್ನೋ ಕುತೂಹಲ ಇದೆ.