ಕಾರವಾರ: ಶಾಲೆಯಿಂದ ಮನೆಗೆ ತೆರಳುವ ಗಡಿಬಿಡಿಯಲ್ಲಿ ಶಾಲಾ ಕೊಠಡಿಯ ಒಳಗೆ ಹೋಗಿದ್ದ ಹಸುವನ್ನು ಎರಡು ದಿನ ಶಿಕ್ಷಕರು ಕೂಠಡಿಯಲ್ಲಿ ಕೂಡಿ ಹಾಕಿದ್ದಾರೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶನಿವಾರದ ದಿನ ಶಾಲೆಯ ಒಳಗೆ ದನ ಹೋಗಿದೆ. ಆದರೆ ಇದನ್ನು ಗಮನಿಸದ ಶಿಕ್ಷಕರು ಹಾಗೆಯೇ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು ಹಸು ಎರಡು ದಿನ ಶಾಲೆಯೊಳಗಡೆ ಬಂಧಿಯಾಗಿದೆ. ಹಸುವಿಗೆ ಆಹಾರವಿಲ್ಲದೇ ಹಸುವಿನಿಂದ ಇಂದು ಗೋಗರೆದಿದ್ದು ನಂತರ ಅಕ್ಕಪಕ್ಕದ ಜನರಿಗೆ ತಿಳಿದು ಕೊಠಡಿ ನೋಡಿದಾಗ ಹಸು ಇರುವುದು ಪತ್ತೆಯಾಯಿತು.
ನಂತರ ಇಂದು ಹಸುವಿಗೆ ಕೊಠಡಿಯಿಂದ ಮುಕ್ತಿ ನೀಡಲಾಗಿದ್ದು, ಶಿಕ್ಷಕರ ನಿರ್ಲಕ್ಷದ ವಿರುದ್ಧ ಸಾರ್ವಜನಿಕರು ಕಿಡಿ ಕಾರಿದ್ದಾರೆ. ಶಿಕ್ಷಕರು ಮನೆಗೆ ಹೋಗುವ ಗಡಿಬಿಡಿಯಲ್ಲಿ ಹಸು ಬಂದಿರುವುದನ್ನು ನೋಡದೆ ಬೀಗ ಹಾಕಿ ಹೋಗಿದ್ದಾರೆ. ಒಂದು ವೇಳೆ ಇದೇ ಕೊಠಡಿಯಲ್ಲಿ ಮಕ್ಕಳಿದ್ದಿದ್ದರೆ ಏನು ಗತಿ ಎಂದು ಶಿಕ್ಷಕರ ನಿರ್ಲಕ್ಷ್ಯಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.