ಬೆಂಗಳೂರು: ಕಾಸರಗೂಡಿನಲ್ಲಿ ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ದೂರು ನೀಡಿದ್ದಾರೆ.
ಸಂತ್ರಸ್ತೆ ಮೇಲೆ ಕಳೆದ ಒಂದು ವರ್ಷದಿಂದ ಕಾಸರಗೋಡು ಮೂಲದ ಇಬ್ಬರು ಯುವಕರು ಅತ್ಯಾಚಾರ ಎಸಗಿದ್ದಾರೆ. ಅವರ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಿಸಿಕೊಂಡು ಕ್ರಮ ಜರುಗಿಸುವಂತೆ ಆಗ್ರಹಿಸಿ ಶೋಭಾ ಅವರು ನೊಂದ ಸಂತ್ರಸ್ತೆಯೊಂದಿಗೆ ಬಂದು ಕಮೀಷನರ್ಗೆ ದೂರು ನೀಡಿದರು.
ಸಂತ್ರಸ್ತೆ ನನಗೆ ಶನಿವಾರ ಫೋನ್ ಮಾಡಿ ಆಗಿರುವ ಅನ್ಯಾಯದ ಬಗ್ಗೆ ವಿವರಿಸಿದರು. ಸಂತ್ರಸ್ತೆಯನ್ನು ಕಾಸರಗೋಡಿನಿಂದ ಕಾರಿನಲ್ಲಿ ಕರೆದುಕೊಂಡು ಬಂದು ಎಲೆಕ್ಟ್ರಾನಿಕ್ ಸಿಟಿಯಲ್ಲೂ ಅತ್ಯಾಚಾರ ಎಸಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಕಮೀಷನರ್ಗೆ ದೂರು ಕೊಡಲಾಗಿದೆ. ಕಮೀಷನರ್ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅದರಂತೆ ಬೆಂಗಳೂರಿನಲ್ಲಿ ನಡೆದ ಘಟನೆಯ ಬಗ್ಗೆ ಸಂತ್ರಸ್ತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿದ್ದಾರೆ ಎಂದರು.
ದೂರು ಕೊಟ್ಟ ಬಳಿಕ ಪೊಲೀಸರು ಕಾಸರಗೋಡು ಡಿಜಿಗೆ ಕರೆ ಮಾಡಿ ವಿಚಾರಿಸಿದಾಗ ಈ ಘಟನೆ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಸೂಕ್ ಮತ್ತು ರಿಷಬ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಆರೋಪಿಗಳು ಬೇರೆ ಬೇರೆ ಕಡೆ ಏನಾದರೂ ಬೇರೆ ಹುಡುಗಿಯರನ್ನ ಅತ್ಯಾಚಾರ ಮಾಡಿದ್ದಾರೆಂಬುವುದರ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಮಾಧ್ಯಮ ಬಳಿ ಶೋಭಾ ವಿವರಿಸಿದರು.
ಅಲ್ಲದೇ ಸಂತ್ರಸ್ತೆಗೆ ತಂದೆಯನ್ನ ಬಿಟ್ಟು ನೀವೆಲ್ಲರೂ ಕೂಡ ಮುಸ್ಲಿಂ ಸುಮುದಾಯಕ್ಕೆ ಮತಾಂತರವಾಗುವಂತೆ ಒತ್ತಾಯಿಸಿ ಆರೋಪಿಗಳಿಬ್ಬರು ಬೆದರಿಸಿದ್ದಾರೆಂದು ಶೋಭಾ ಕರಂದ್ಲಾಜೆ ಆರೋಪಿಸಿದರು.