ಚಿಕ್ಕಬಳ್ಳಾಪುರ: ಪರಸ್ಪರ ಪ್ರೀತಿಸುತ್ತಿದ್ದ ಯುವಕ ಹಾಗೂ ಯುವತಿಯ ಮದುವೆಯನ್ನು ಬಿಜೆಪಿ ಮುಖಂಡರೇ ಮುಂದೆ ನಿಂತು ಮಾಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದ ಪುರಾತನ ಪ್ರಸಿದ್ಧ ಅಶ್ವತ್ಥನಾರಾಯಣ ದೇಗುಲದಲ್ಲಿ ಮದುವೆ ನಡೆದಿದೆ.
ಗೌರಿಬಿದನೂರು ನಗರದ ಉಪ್ಪಾರ ಕಾಲೋನಿ ನಿವಾಸಿಗಳಾದ ಮಂಜುನಾಥ್ ಹಾಗೂ ಸುಹಾನಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ ಮಂಜುನಾಥ್ ಪರವಾಗಿ ಮುಂದೆ ನಿಂತ ಬಿಜೆಪಿ ಮುಖಂಡರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಹಾಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎಂ.ಎನ್ ರವಿನಾರಾಯಣರೆಡ್ಡಿ ಹಾಗೂ ಬಿಜೆಪಿ ಮುಖಂಡ ಜಯಣ್ಣ ಯುವತಿಯ ಪೋಷಕರನ್ನು ಓಪ್ಪಿಸುವ ಪ್ರಯತ್ನ ನಡೆಸಿದ್ದಾರೆ.
ಆದರೆ ಯುವತಿ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಕೊನೆಗೆ ಯುವಕ-ಯುವತಿಯ ಒಪ್ಪಿಗೆಯಂತೆ ಎಂ.ಎನ್ ರವಿನಾರಾಯಣ ರೆಡ್ಡಿಯೇ ಮುಂದೆ ನಿಂತು ಸರಳವಾಗಿ ವಿದುರಾಶ್ವತ್ಥ ಗ್ರಾಮದ ಅಶ್ವತ್ಥನಾರಾಯಣನ ಸನ್ನಿಧಿಯಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿಸಿದ್ದಾರೆ. ದೇಶದೆಲ್ಲೆಡೆ ಒಂದೆಡೆ ಪೌರತ್ವದ ಕಿಚ್ಚಿನ ನಡುವೆಯೇ ಇಲ್ಲಿ ಅಂತರ್ ಧರ್ಮಿಯ ವಿವಾಹ ಸುಗಮವಾಗಿ ನಡೆದಿದ್ದು, ಎಲ್ಲರ ಚರ್ಚೆಗೂ ಗ್ರಾಸವಾಗಿದೆ.